ಬೆಂಗಳೂರು: ‘ನನ್ನ ಮಾನಹಾನಿಯಾಗಿದೆ‘ ಎಂದು ಆರೋಪಿಸಿ ಚಿತ್ರನಟ ಸುದೀಪ್ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಚಿತ್ರ ನಿರ್ಮಾಪಕ ಎನ್.ಎಂ.ಕುಮಾರ್ ಹಾಗೂ ಎನ್.ಎಂ.ಸುರೇಶ್ ಅವರಿಗೆ ಸಮನ್ಸ್ ಜಾರಿಗೊಳಿಸಲು ನಗರದ 13ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಗುರುವಾರವಷ್ಟೇ (ಆ.10) ಫಿರ್ಯಾದುದಾರ ಸುದೀಪ್ ಅವರ ಸ್ವಯಂ ಹೇಳಿಕೆ ದಾಖಲು ಮಾಡಿಕೊಂಡಿದ್ದ ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ ಅವರು, ಶುಕ್ರವಾರ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದು, ಇದೇ 26ರಂದು ಕೋರ್ಟ್ಗೆ ಹಾಜರಾಗುವಂತೆ ಆದೇಶಿಸಿದ್ದಾರೆ.
ಪ್ರಕರಣವೇನು?: ‘ನನ್ನ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿ ಸುದೀಪ್ ಕಳೆದ 7-8 ವರ್ಷಗಳ ಹಿಂದೆ ನನ್ನಿಂದ ಮುಂಗಡ ಹಣ ಪಡೆದಿದ್ದರು. ಆದರೆ, ಇದುವರೆವಿಗೂ ಕಾಲ್ಶೀಟ್ ನೀಡಿಲ್ಲ. ನನ್ನ ಹಣವನ್ನೂ ವಾಪಸ್ ಕೊಡುತ್ತಿಲ್ಲ' ಎಂದು ನಿರ್ಮಾಪಕ ಎಂ.ಎನ್.ಕುಮಾರ್ ಆರೋಪಿಸಿದ್ದರು. ಸಮಸ್ಯೆ ಬಗೆಹರಿಸುವಂತೆ ಕೋರಿ ಫಿಲ್ಮ್ ಛೇಂಬರ್ ಮೆಟ್ಟಿಲೇರಿದ್ದರು. ಮಾಧ್ಯಮ ಗೋಷ್ಠಿಗಳಲ್ಲೂ ಈ ಕುರಿತಂತೆ ಅವರು ಸಾರ್ವಜನಿಕವಾಗಿ ಸುದೀಪ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದು, ‘ಕುಮಾರ್ ಹೇಳಿಕೆಯಿಂದ ನಾನು ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ಗಳಿಸಿದ್ದ ವರ್ಚಸ್ಸಿಗೆ ಧಕ್ಕೆಯಾಗಿದೆ. ನನ್ನ ಮಾನಹಾನಿಯಾಗಿದೆ‘ ಎಂದು ಆರೋಪಿಸಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.