ಬಿಗ್ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಉಸಿರೇ ಉಸಿರೇ’ ಚಿತ್ರ ಮೇ 3ರಂದು ಬಿಡುಗಡೆಯಾಗಲಿದೆ.
ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ರಾಜೀವ್ಗೆ ಶ್ರೀಜಿತ ಘೋಶ್ ಜೋಡಿಯಾಗಿದ್ದಾರೆ. ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸಿ.ಎಂ.ವಿಜಯ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಈ ಚಿತ್ರಕ್ಕಾಗಿ ಐದು ವರ್ಷ ಶ್ರಮಪಟ್ಟಿದ್ದೇನೆ. ಈ ಅವಧಿಯಲ್ಲಿ ಬೇರೆ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಕಿಚ್ಚ ಸುದೀಪ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ’ ಎನ್ನುತ್ತಾರೆ ರಾಜೀವ್.
ಡೈನಾಮಿಕ್ ಸ್ಟಾರ್ ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಬ್ರಹ್ಮಾನಂದಂ, ಅಲಿ, ಸಾಧುಕೋಕಿಲ, ಮಂಜು ಪಾವಗಡ ಚಿತ್ರದ ತಾರಾಬಳಗದಲ್ಲಿದ್ದಾರೆ.
‘ಬೀದಿಗೆ ಬಿಟ್ಟ ನಿರ್ದೇಶಕ’: ‘₹2 ಕೋಟಿಯಲ್ಲಿ ಸಿನಿಮಾ ಮಾಡುತ್ತೇನೆ ಎಂದು ನಿರ್ದೇಶಕ ವಿಜಯ್ ಹೇಳಿದರು. ಸಿನಿಮಾಗೆ ₹6 ಕೋಟಿ ಸುರಿದಿದ್ದೇನೆ. ಎಲ್ಲಾ ಸುಳ್ಳುಗಳನ್ನು ಹೇಳಿದರು. ಅವರಿಂದ ಸಾಲಗಾರನಾದೆ. ನಿರ್ದೇಶಕನಾದವನು ಸಿನಿಮಾ ಸಂಪೂರ್ಣಗೊಳಿಸಿಲ್ಲ. ನಾನು ಹಾಗೂ ರಾಜೀವ್ ಸಿನಿಮಾ ಪೂರ್ಣಗೊಳಿಸಿದೆವು. ಸಿ.ಎಂ.ವಿಜಯ್ ಕೆಲವು ತಿಂಗಳುಗಳಿಂದ ನಮ್ಮ ಸಂಪರ್ಕದಲ್ಲಿಲ್ಲ. ಫೋನ್ ಕರೆ ಸ್ವೀಕರಿಸುತ್ತಿಲ್ಲ’ ಎಂದು ಕಣ್ಣೀರು ಹಾಕಿದರು ನಿರ್ಮಾಪಕ ಪ್ರದೀಪ್ ಯಾದವ್.