‘ಚಿತ್ರಕಥಾ’ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಕಲಾವಿದನೊಬ್ಬನ ಬದುಕಿನ ಕಥೆ ಆಧರಿಸಿದ ಚಿತ್ರ ಇದು. ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.
ಕಲಾವಿದನೊಬ್ಬ ಬದುಕಿನಲ್ಲಿ ಕಷ್ಟಪಟ್ಟು ಒಂದು ಹಂತ ದಾಟುತ್ತಾನೆ. ಆತನ ಕಲೆಗೆ ಗುರುತು ಸಿಗುತ್ತದೆ. ಆ ಗುರಿ ಸಾಧನೆಗಾಗಿ ಆತ ಬಣ್ಣದಲೋಕದಲ್ಲಿ ವಿಹರಿಸಲು ಹೇಗೆ ಮಾನಸಿಕವಾಗಿ ಸಜ್ಜಾಗುತ್ತಾನೆ. ಆ ಪಯಣದಲ್ಲಿ ಎದುರಾಗುವ ಸಂಕಷ್ಟಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದೇ ಈ ಚಿತ್ರದ ತಿರುಳು.
ಅನಿಮೇಷನ್ನಲ್ಲಿ ಪರಿಣತರಾಗಿರುವ ಯಶಸ್ವಿ ಬಾಲಾದಿತ್ಯಾ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ‘ಅಪರಿಚಿತ ವ್ಯಕ್ತಿ ಹಾಗೂ ಸೃಜನಾತ್ಮಕತೆಯ ಮಿಶ್ರಣವೇ ಈ ಸಿನಿಮಾ’ ಎಂದು ಹೇಳಿದರು.
ಕಲಾವಿದನಾಗುವ ಆಸೆ ಹೊಂದಿದ್ದ ಸುಜಿತ್ ರಾಥೋಡ್ ಈ ಚಿತ್ರದ ನಾಯಕ. ವೈದ್ಯೆಯಾಗಿ ಸುಧಾರಾಣಿ ಬಣ್ಣ ಹಚ್ಚಿದ್ದಾರೆ. ತಬಲ ನಾಣಿ, ದಿಲೀಪ್ರಾಜ್, ಬಿ. ಜಯಶ್ರೀ ತಾರಾಗಣದಲ್ಲಿದ್ದಾರೆ.
ಎರಡು ಹಾಡುಗಳಿಗೆ ಚೇತನ್ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ತನ್ವಿಕ್ ಜಿ. ಅವರದ್ದು. ಪ್ರಜ್ವಲ್ ಎಂ. ರಾಜ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ.ಬೆಂಗಳೂರು, ಕೇರಳ, ಮಂಗಳೂರು, ಮಡಿಕೇರಿ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.