ಗಿಲ್ಲಿ ವೆಂಕಟೇಶ್ ಕಥೆ–ಚಿತ್ರಕಥೆ ಬರೆದು ನಿರ್ದೇಶಿಸಿರುವಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕಾಮಿಡಿಯ ಸಮ್ಮಿಶ್ರಣದ ‘ತಾಳಟ್ಟಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರೀಕರಣೋತ್ತರ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಂಡಿದೆ.
ಈ ಚಿತ್ರದಲ್ಲಿ ಸೆಂಟಿಮೆಂಟ್, ಎಮೋಷನ್ಸ್, ಫ್ಯಾಮಿಲಿ ರಿಲೇಶನ್ ಜೊತೆಗೆ ಪ್ರೇಕ್ಷಕರನ್ನು ಕಾಮಿಡಿ ಮೂಲಕ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಕಂಟೆಂಟ್ ಕೂಡ ಇದೆ ಎನ್ನುವುದು ನಿರ್ದೇಶಕರ ಮಾತು.
ಚಿತ್ರದ ಕಥಾಹಂದರ ಬಗ್ಗೆಯೂ ಒಂದಿಷ್ಟು ಮಾಹಿತಿ ಅರುಹಿರುವ ಗಿಲ್ಲಿ ವೆಂಕಟೇಶ್, ‘ಪ್ರೀತಿ, ಪ್ರೇಮ ಎಂದು ಯುವತಿಯರ ಹಿಂದೆ ಅಲೆದಾಡುವ ಯುವಕ ಪ್ರೇಮಿಗಳಿಗೆ ತಾನು ಬಯಸಿದ ಪ್ರೀತಿ ಸಿಕ್ಕರೆ ಸ್ವರ್ಗ, ಸಿಗದಿದ್ದರೆ ನರಕದ ಅನುಭವ. ಈ ಸ್ವರ್ಗ ಮತ್ತು ನರಕದ ಹಾದಿಗಳು ಜೋಡಿರಸ್ತೆ ಇದ್ದಂತೆ. ಈ ಎರಡು ದಾರಿಯ ಅನುಭವವನ್ನ ಎಳೆ, ಎಳೆಯಾಗಿ ಬಿಚ್ಚಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ನಾಯಕನ ಸ್ನೇಹಿತನಿಂದಾದ ಒಂದು ಘಟನೆಯಿಂದ ಸದ್ಯದ ಪರಿಸ್ಥಿತಿಯಲ್ಲಿ ಒಳಿತಾದರೂ, ಮುಂದೆ ಅದೇ ಘಟನೆಯಿಂದ ನಾಯಕನ ಕುಟುಂಬಕ್ಕೆ ತೊಂದರೆಯಾಗಿ, ನಾಯಕನ ಜೀವದ ಮೇಲೆ ತೂಗುಗತ್ತಿ ನೇತಾಡುತ್ತದೆ. ನಾಯಕ ತನ್ನ ಜೀವ ಉಳಿಸಿಕೊಳ್ಳಲು ಪಡುವ ಪ್ರಯತ್ನವೇ ‘ತಾಳಟ್ಟಿ’ ಚಿತ್ರದ ಕಥಾನಕ’ ಎಂದಿದ್ದಾರೆ.
ನಾಯಕನಾಗಿ ಯತೀಶ್, ನಾಯಕಿಯಾಗಿ ಪ್ರತಿಮಾ ಬಣ್ಣಹಚ್ಚಿದ್ದಾರೆ.ಹಯಾತ್ ಖಾನ್, ದೀಪಾ, ಬೇಬಿ ಕೃತಿ ನಟರಾಜ, ದಿಲೀಪ್ಕುಮಾರ್, ಸಿದ್ದು ಮಂಡ್ಯ, ಮೋನಿಷಾ, ಕಲಾ ಮಂಜುನಾಥ್, ಮಾದಪ್ಪ ಮಂಡ್ಯ, ಶ್ರೀನಿವಾಸ್ ಸೇರಿದಂತೆ ಹಲವು ಹೊಸ ಪ್ರತಿಭೆಗಳ ತಾರಾಗಣವಿದೆ.
ಸೆವೆನ್ಸ್ಟಾರ್ ಪ್ರೊಡಕ್ಷನ್ಸ್ ಮತ್ತು ಸೃಜನ ಮೀಡಿಯಾಹೌಸ್ ಸಹಕಾರದಲ್ಲಿ, ಕಲ್ಪತರು ಕಂಬೈನ್ಸ್ ಅಡಿ ಹರ್ಷವರ್ಧನ್, ಹಯಾತ್ಖಾನ್, ರಾಕೇಶ್ ಡಿ., ದಿಲೀಪ್ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇಮ್ತಿಯಾಜ್ ಖಾನ್ ಹಾಗೂ ಅಶೋಕ್ ಹಣಗಿ ಅವರ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಸಂಯೋಜನೆ, ರಕ್ಷಿತ್ ಜಿ. ಮಲ್ಲಪ್ಪ ಸಂಕಲನವಿದೆ.