ಟೀಸರ್ನಲ್ಲೇ ಖದರ್ ತೋರಿಸಿದ್ದ ಖಳನಾಯಕನನ್ನು ನಿರ್ದೇಶಕ ಪರಮ್ ಹೀಗೆ ವಿವರಿಸಿದ್ದಾರೆ. ‘ಸುಯೋಧನ ಇಲ್ಲದ ಮಹಾಭಾರತ ಇಲ್ಲ. ರಾವಣನಿಲ್ಲದ ರಾಮಾಯಣವಿಲ್ಲ. ಇಷ್ಟ ಇಲ್ಲ ಎಂದು ಎಷ್ಟೇ ಹೇಳಿದರೂ ಖಳನಾಯಕರ ಪಾತ್ರಕ್ಕೆ ಅದೇನೋ ಸೆಳೆತ ಇದೆ. ಇಲ್ಲದಿದ್ದರೆ ರಾವಣನ ಲಂಕೆ ಸುಭಿಕ್ಷವಾಗಿತ್ತು ಎಂದು ಓದಿದಾಗ ಯಾಕೆ ಖುಷಿಯಾಗಬೇಕು? ಸುಯೋಧನ ಮತ್ತು ಕರ್ಣನ ನಡುವಿನ ಗೆಳೆತನವನ್ನು ನೋಡಿ ಯಾಕೆ ನಾವು ಭಾವುಕರಾಗಬೇಕು? ಕಥೆಯನ್ನು ಮುಂದೆ ತೆಗೆದುಕೊಂಡು ಹೋಗುವವನು, ನಾಯಕನ ಮೌಲ್ಯಗಳನ್ನು ಪ್ರಶ್ನಿಸುವವನು, ಕಥೆಗೊಂದು ಎನರ್ಜಿ ಕೊಡುವವನು ಖಳನಾಯಕ! ‘ದಿನೂ ಸಾವ್ಕಾರ್’ನದು ರಣತಂತ್ರದಲ್ಲಿ ಎತ್ತಿದ ಕೈ. ಬುದ್ಧಿವಂತ. ಸ್ವಲ್ಪ ಅನ್ಸ್ಟೇಬಲ್. ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂದುಕೊಂಡಿರುವ ವ್ಯಕ್ತಿ. ಮಾತು ಕೇಳದವರನ್ನು ಕೇಳಿಸುತ್ತೇನೆ ಎನ್ನುವುದನ್ನು ನಂಬಿದವನು. ಸಿಕ್ಕಾಪಟ್ಟೆ ಮಜಾ ಕೊಡುವ ಪಾತ್ರವಿದು. ರಮೇಶ್ ಇಂದಿರಾ ಅವರು ಈ ಪಾತ್ರವನ್ನು ನಿಭಾಯಿಸಿದ ರೀತಿ ನೋಡಿ ನಾನೂ ಗಾಬರಿಗೊಂಡಿದ್ದೆ’ ಎಂದಿದ್ದಾರೆ ಪರಮ್.