ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರಕಲ್ಲುಗಳ ಮಾಯಾ ಜಾಲ

Last Updated 27 ಫೆಬ್ರುವರಿ 2018, 9:25 IST
ಅಕ್ಷರ ಗಾತ್ರ

ವಿಜಯಪುರ: ಮಕ್ಕಳು ರಚ್ಚೆ ಹಿಡಿದಾಗ, ಹುಷಾರು ತಪ್ಪಿದಾಗ ಮಂತ್ರ ಹಾಕಿಸುವುದು, ತಾಯತ ಕಟ್ಟಿಸುವ ಪದ್ಧತಿ ಗ್ರಾಮೀಣ ಭಾಗದಲ್ಲಿ ಈಗಲೂ ಚಾಲ್ತಿಯಲ್ಲಿ ಇದೆ. ಬೆಳ್ಳಿ, ಪಂಚಲೋಹ ಅಥವಾ ತಾಮ್ರದ ಹಾಳೆಯ ಮೇಲೆ ಬೀಜಾಕ್ಷರ, ಮಂತ್ರ ಇತ್ಯಾದಿ ಬರೆದು ತಾಯತದಲ್ಲಿಟ್ಟು ಕಟ್ಟುವುದರಿಂದ ದುಷ್ಟ ಶಕ್ತಿಗಳಿಂದ, ವ್ಯಾಧಿಗಳಿಂದ ವಿಮುಕ್ತಿ ಸಿಗುವುದೆಂಬ ನಂಬಿಕೆ ಜನರದ್ದು. ಇದೇ ರೀತಿ ಇಡೀ ಗ್ರಾಮಕ್ಕೆ ಪೀಡಾ ಪರಿಹಾರಕ್ಕೆಂದು ಬಹಳ ಹಿಂದೆ ಹಿರಿಯರು ಕಲ್ಲುಗಳನ್ನು ನಿರ್ಮಿಸಿದ್ದಾರೆ. ಇವನ್ನು ಯಂತ್ರದ ಕಲ್ಲುಗಳೆಂದು ಕರೆಯುತ್ತಾರೆ.

ಗ್ರಾಮದ ಶ್ರೇಯಸ್ಸಿಗಾಗಿ ನಿರ್ಮಿಸುತ್ತಿದ್ದ ಇಂತಹ ಪುರಾತನ ಕಲ್ಲುಗಳು ಹಲವೆಡೆ ಕಂಡು ಬರುತ್ತಿರುವುದು ಈಗಲೂ ಪದ್ಧತಿ ಆಚರಣೆಯಲ್ಲಿರುವುದಕ್ಕೆ ನಿದರ್ಶನವಾಗಿದೆ. ಇಂತಹ ಕಲ್ಲುಗಳನ್ನು ಅದರ ಬಗ್ಗೆ ತಿಳಿಯದೇ ಪೂಜನೀಯ ವಸ್ತುವೆಂದು ಭಾವಿಸಿ ಕೆಲವೆಡೆ ಪೂಜಿಸುತ್ತಿದ್ದರೆ, ಇನ್ನು ಕೆಲವು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಸಾಮಾನ್ಯವಾಗಿ ಈ ಬಗೆಯ ಶಾಸನಗಳನ್ನು ಹಳ್ಳಿಗಳ ಮುಂದೆ ಗಮನಿಸಬಹುದು. ಪೀಡಾ ಪರಿಹಾರಕ್ಕಾಗಿ ಯಂತ್ರವನ್ನು ಬರೆದು ನಿಲ್ಲಿಸಿರುತ್ತಾರೆ. ಇವುಗಳನ್ನು ಹಳ್ಳಿಯ ಜನ ಇಂದಿಗೂ ಹಲವೆಡೆ ಪೂಜಿಸುತ್ತಾರೆ. ಈ ರೀತಿ ಪೂಜಿಸುವುದರಿಂದ ದನಕರುಗಳಿಗೆ ಅಥವಾ ತಮಗೆ ಒದಗಿರುವ ಪೀಡೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಜನರದ್ದು ಎನ್ನುತ್ತಾರೆ ಸ್ಥಳೀಯರಾದ ನಾರಾಯಣಪ್ಪ ಮತ್ತು ಅಶ್ವತ್ಥಪ್ಪ.

ಕೆಲವು ಯಂತ್ರಗಳಲ್ಲಿ ಕೇವಲ ಬೀಜಾಕ್ಷರಗಳಿದ್ದರೆ ಕೆಲವು ಪೀಡಾ ಪರಿಹಾರಕ್ಕೆ ಹಾಕಿಸಿರುವ ಕಟ್ಟುಯಂತ್ರ ಅಥವಾ ದಿಗ್ಬಂಧನ ಯಂತ್ರವಾಗಿರುತ್ತವೆ. ಹೆಚ್ಚಾಗಿ ತಾಮ್ರಪಟಗಳ ಮೇಲೆ ಈ ರೀತಿಯ ಯಂತ್ರ ಮಂತ್ರಗಳನ್ನು ಬರೆದಿರುವುದೇ ಹೆಚ್ಚು. ಈಗಲೂ ಚಿಕ್ಕದಾದ ತಾಮ್ರದ ಹಾಳೆಯಲ್ಲಿ ಬರೆದು ತಾಯತದಲ್ಲಿಟ್ಟು ಕಟ್ಟುವುದು, ಕೊಂಚ ದೊಡ್ಡದಾದರೆ ಅದಕ್ಕೆ ಚೌಕಟ್ಟು ಹಾಕಿಸಿ ಅಂಗಡಿ ಮನೆಗಳಲ್ಲಿ ನೇತುಹಾಕುವುದು ಬಳಕೆಯಲ್ಲಿದೆ.

ಈ ಪುರಾತನ ಯಂತ್ರದ ಕಲ್ಲುಗಳಿಂದ ಯಂತ್ರ ಮಂತ್ರ ಚಿಕಿತ್ಸಾ ವಿಧಾನ ಕರ್ನಾಟಕದಲ್ಲಿ ಅದರಲ್ಲೂ ಈ ಭಾಗದಲ್ಲಿ ಪ್ರಚಲಿತದಲ್ಲಿ ಇತ್ತು ಎಂದು ತಿಳಿದು ಬರುತ್ತದೆ. ಈ ರೀತಿಯ ಚಿಕಿತ್ಸಾ ಕ್ರಮದ ಒಂದು ಅನುಸರಣೆಯೇ ಈ ಬಗೆಯ ಶಾಸನಗಳಿಗೆ ಪ್ರೇರಣೆ ನೀಡಿದೆ. ಕಾಲಾಂತರದಲ್ಲಿ ಅಜ್ಞಾನದಿಂದ ಜನರಿಗೆ ಯಾವುದು ಯಂತ್ರ, ಯಾವುದು ಅಲ್ಲ ಎಂಬುದು ತಿಳಿಯದಂತಾಗಿದೆ ಎನ್ನುತ್ತಾರೆ ರಾಮಯ್ಯ ಪಂಡಿತ.

ಹಳ್ಳಿಗಳಲ್ಲಿ ಗೋಕಲ್ಲುಗಳು

ಇವತ್ತಿಗೂ ಬಹುತೇಕ ಹಳ್ಳಿಗಳಲ್ಲಿ ಯಂತ್ರದ ಕಲ್ಲಿನ ಮಾದರಿಯಲ್ಲೇ ನಿರ್ಮಿಸಿರುವ ಗೋ ಕಲ್ಲುಗಳಿಗೂ ಜನರು ಪೂಜೆ ಸಲ್ಲಿಸುವ ವಾಡಿಕೆಯು ಇದೆ. ತೀವ್ರ ಮಳೆಯ ಅಭಾವ ಕಾಡಿದಾಗ, ಊರಿನವರೆಲ್ಲರೂ ಮನೆಗೊಂದು ಬಿಂದಿಗೆಯಂತೆ ನೀರು ತಂದು ಈ ಗೋ ಕಲ್ಲಿಗೆ ಸುರಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿದೆ.

ಹಳ್ಳಿಗಳಲ್ಲಿನ ಹಿರಿಯರೊಟ್ಟಿಗೆ ಹುಡುಗರು ಜೇಡಿಮಣ್ಣಿನಿಂದ ಮಳೆರಾಯನನ್ನು ಮಾಡಿಕೊಂಡು ತಲೆಯ ಮೇಲೆ ಹೊತ್ತುಕೊಂಡು ಮನೆ ಮನೆಗೆ ತೆರಳಿ, ನೀರು ಹಾಕಿಸಿಕೊಂಡು ಕೊನೆಯಲ್ಲಿ ಬಂದು ಗೋ ಕಲ್ಲಿನ ಬಳಯಿಟ್ಟು ಪೂಜಿಸುವ ವಾಡಿಕೆ ಬೆಳೆಸಿಕೊಂಡು ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT