ಸಿಂಧು ಲೋಕನಾಥ್ ಮತ್ತು ವಿಕಾಸ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಕಾಣದಂತೆ ಮಾಯವಾದನು’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಇದನ್ನು ವೀಕ್ಷಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮೆಚ್ಚುಗೆಯ ಮಾತು ಹೇಳಿದ್ದಾರೆ.
‘ಬ್ಯಾಕ್ ಬೆಂಚರ್ಸ್ ಮೋಷನ್ ಪಿಕ್ಚರ್ಸ್’ ಲಾಂಛನದಲ್ಲಿ ಈ ಚಿತ್ರವನ್ನು ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಹಾಗೂ ಪುಷ್ಪಾ ಸೋಮ್ ಸಿಂಗ್ ನಿರ್ಮಾಣ ಮಾಡಿದ್ದಾರೆ.
ರಾಜ್ ಪತ್ತಿಪಾಟಿ ಅವರು ಚಿತ್ರದ ಕಥೆ ಬರೆದು, ನಿರ್ದೇಶನ ಕೂಡ ಮಾಡಿದ್ದಾರೆ. ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರವನ್ನು ಶೀಘ್ರದಲ್ಲೇ ವೀಕ್ಷಿಸಲಿದೆ ಎಂಬ ಸುದ್ದಿ ಚಿತ್ರತಂಡದ ಕಡೆಯಿಂದ ಬಂದಿದೆ.
ಸುಜ್ಞಾನ್ ಅವರು ಚಿತ್ರದ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ವಿಜಯ್ ಗುಮ್ಮಿನೇನಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಕಥೆಯ ಎಳೆಯನ್ನು ರಾಜ್ ಅವರು ಈ ಹಿಂದೆ ಬಹಿರಂಗಪಡಿಸಿದ್ದರು. ‘ಚಿತ್ರದ ನಾಯಕನನ್ನು ಖಳನಾಯಕ ಆರಂಭದಲ್ಲೇ ಸಾಯಿಸುತ್ತಾನೆ. ಆದರೆ, ಸಾಯುವ ಸಂದರ್ಭದಲ್ಲಿ ನಾಯಕ ಮಾಡಬೇಕಾದ ಒಂದಿಷ್ಟು ಕೆಲಸಗಳು ಉಳಿದುಕೊಂಡಿರುತ್ತವೆ. ನಾಯಕನ ಆತ್ಮವು ಇನ್ನೊಂದು ಆತ್ಮವನ್ನು ಭೇಟಿ ಮಾಡುತ್ತದೆ. ಇನ್ನೊಂದು ಆತ್ಮದ ಪಾತ್ರವನ್ನು ಅಚ್ಯುತ್ ಕುಮಾರ್ ನಿಭಾಯಿಸಿದ್ದಾರೆ. ಇಲ್ಲಿನ ಆತ್ಮಗಳಿಗೆ ಹೆಚ್ಚಿನ ಶಕ್ತಿಯೇನೂ ಇರುವುದಿಲ್ಲ. ಹಾಗೆ ಶಕ್ತಿ ಇಲ್ಲದ ನಾಯಕನ ಆತ್ಮವು ದ್ವೇಷ ತೀರಿಸಿಕೊಳ್ಳುವುದು ಹೇಗೆ ಎಂಬುದು ಕಥೆ’ ಎಂದು ಅವರು ಹೇಳಿದ್ದರು.
ವಿನಯಾ ಪ್ರಸಾದ್, ಸುಚೇಂದ್ರ ಪ್ರಸಾದ್, ರಾಘವ್ ಉದಯ್, ಭಜರಂಗಿ ಲೋಕಿ, ಧರ್ಮಣ್ಣ, ಸೀತಾ ಕೋಟೆ, ಸನ್ನಿ ಮಹಿಪಾಲ್, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ಚಿತ್ರದ ತಾರಾಬಳಗದಲ್ಲಿದ್ದಾರೆ.