ಕೊಳೆಗೇರಿಯಲ್ಲಿ ಚಿಂದಿ ಆಯುವ ಇಬ್ಬರು ಹುಡುಗರು ಹಣದ ಆಸೆಗಾಗಿ ಕೆಟ್ಟ ಕೆಲಸ ಮಾಡಲಾರಂಭಿಸುತ್ತಾರೆ. ಈ ಸ್ನೇಹಿತರ ಜೀವನದಲ್ಲಿ ನಡೆಯುವ ಘಟನೆ ಇಟ್ಟುಕೊಂಡು ನಿರ್ದೇಶಕ ರಾಜು ಡಿ. ಪದ್ಮಶಾಲಿ ‘ಸಲಾಂ ಬೆಂಗಳೂರು’ ಸಿನಿಮಾದ ಕಥೆ ಹೊಸೆದಿದ್ದಾರೆ. ಜೊತೆಗೆ, ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಸಂದೇಶ್ ಪೂಜಾರ್ ಹಾಗೂ ಕಿರುತೆರೆ ನಟಿ ಗೌತಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿವೆ. ಕೊಳೆಗೇರಿಯಲ್ಲಿ ನಡೆಯುವ ಘಟನೆಗಳನ್ನು ಸಸ್ಸೆನ್ಸ್, ಥ್ರಿಲ್ಲರ್ ಹಾಗೂ ಹಾರರ್ ಮೂಲಕ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕರದ್ದು. ಚಿತ್ರದ ಪ್ರಥಮ ಪ್ರತಿಯೂ ಹೊರಬಂದಿದೆ.
ಆರ್.ಡಿ.ಪಿ. ಮೂವಿ ಮೇಕರ್ ಲಾಂಛನದಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಸ್. ನಾಗು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮನೋಹರ್ ಅವರದ್ದು. ಆನಂದ್ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ರಾಜು.ಡಿ ಸಂಭಾಷಣೆ, ರಘು ಅವರ ಸಂಕಲನವಿದೆ. ರಾಹುಲ್ ಸುಧಾಮಷ್, ಮೆಂಡ್ರು ಬ್ರದರ್ಸ್ ಸಹ ನಿರ್ಮಾಪಕರಾಗಿದ್ದಾರೆ. ನಾಗರಾಜ್ ಅವರ ನೃತ್ಯ ನಿರ್ದೇಶನವಿದೆ.