ಯೋಗರಾಜ್ ಭಟ್ ಅವರ ‘ಪಂಚತಂತ್ರ’ ಸಿನಿಮಾದ ಮೊದಲ ವಿಡಿಯೊ ಸಾಂಗ್ ಡಿ. 25ರಂದು ಬಿಡುಗಡೆಯಾಗಲಿದೆ. ಈ ಮೂಲಕ ಕ್ರಿಸ್ಮಸ್ ಹಬ್ಬಕ್ಕೆ ಶೃಂಗಾರದ ಹಾಡಿನ ಗಿಫ್ಟ್ ಕೊಡಲು ತಂಡ ಸಜ್ಜಾಗಿದೆ. ಯೋಗರಾಜ್ ಭಟ್ ಅವರೇ ಬರೆದಿರುವ ಸಾಹಿತ್ಯಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶೃಂಗಾರದ ಪಲುಕು ಪುಳಕಗಳನ್ನು ಹದವಾಗಿ ಬೆರೆಸಿರುವ ಹಾಡನ್ನು ಮತ್ತೆ ಮತ್ತೆ ಮೆಲುಕು ಹಾಕುವ ಹಾಗೆ ಹಾಡಿದ್ದಾರೆ ವಿಜಯ ಪ್ರಕಾಶ್. ಭಟ್ಟರ ಪೋಲಿತನ ಮತ್ತು ಕಾವ್ಯಗುಣ ಎರಡರ ಜುಗಲ್ಬಂದಿಯಂತೆ ಕಾಣುವ ಸಾಲುಗಳಿಗೆ ಚಿತ್ರತಂಡದ ಕಲಾವಿದ ಉಮೇಶ್ ಕುಟ್ನಿ ಅವರು ಕಲಾಕೃತಿಯ ರೂಪ ಕೊಟ್ಟಿದ್ದಾರೆ. ಸಾಲುಗಳನ್ನು ಕೇಳುತ್ತ ಮನಸಲ್ಲಿ ಅರಳುವ ಬೆಚ್ಚಗಿನ ಕಲ್ಪನೆಯೇ ಕಣ್ಮುಂದೆ ಜೀವತಳೆದಂತೆ ಕುಂಚವನ್ನು ಹರಿಬಿಟ್ಟಿದ್ದಾರೆ ಅವರು. ‘ಶೃಂಗಾರದ ಹೊಂಗೆ ಮರ ಹೂಬಿಟ್ಟಿದೆ/ನಾಚಿಕೆಯೂ ನನ್ನ ಜತೆ ಟೂ ಬಿಟ್ಟಿದೆ’ ಎಂದು ಶುರುವಾಗುವ ಈ ಹಾಡಿನ ಸಾಹಿತ್ಯ ಮತ್ತು ಉಮೇಶ್ ಕುಟ್ನಿ ರಚಿಸಿದ ಕಲಾಕೃತಿ ಎರಡೂ ಇಲ್ಲಿವೆ.