ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಸಿದ್ಧಾರ್ಥ್‌ ಬಳಿ ಪ್ರಕಾಶ್ ರಾಜ್ ಕ್ಷಮೆ ಕೇಳಿದ್ದು ಯಾಕೆ? ಕಾರಣ ಇಲ್ಲಿದೆ

Published 29 ಸೆಪ್ಟೆಂಬರ್ 2023, 7:45 IST
Last Updated 29 ಸೆಪ್ಟೆಂಬರ್ 2023, 7:45 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳು ನಟ ಸಿದ್ಧಾರ್ಥ್‌ ಅವರನ್ನು ಸಿನಿಮಾ ಪ್ರಚಾರ ನಡೆಸದಂತೆ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಕಾರ್ಯಕರ್ತರು ತಡೆದಿದ್ದ ಘಟನೆಗೆ ಸಂಬಂಧಿಸಿ ನಟ ಪ್ರಕಾಶ್‌ ರಾಜ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ‘ಚಿಕ್ಕು’ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ತಮಿಳು ನಟ ಸಿದ್ಧಾರ್ಥ್‌ ಅವರಿಗೆ ಗುರುವಾರ ಕಾವೇರಿ ಹೋರಾಟದ ಬಿಸಿ ತಟ್ಟಿತ್ತು. ಸಿನಿಮಾ ಪ್ರಚಾರ ನಡೆಸದಂತೆ ಕರವೇ ಕಾರ್ಯಕರ್ತರು ಅವರನ್ನು ತಡೆದಿದ್ದರು.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, ಕಾವೇರಿ ನಮ್ಮದು.. ಹೌದು.. ನಮ್ಮದೇ.. ಆದರೆ, ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು ನಾಯಕರನ್ನು ಪ್ರಶ್ನಿಸದೆ. ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ. ಅಸಹಾಯಕ ಜನಸಾಮಾನ್ಯರನ್ನು. ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹೃದಯ ಕನ್ನಡಿಗರ ಪರವಾಗಿ ಸಿದ್ಧಾರ್ಥ್‌ ಬಳಿ ಕ್ಷಮೆಯಾಚಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಏನಿದು ಘಟನೆ?

ತಮ್ಮ ‘ಚಿಕ್ಕು’ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ತಮಿಳು ನಟ ಸಿದ್ಧಾರ್ಥ್‌ ಅವರಿಗೆ ಕಾವೇರಿ ಹೋರಾಟದ ಬಿಸಿ ತಟ್ಟಿತ್ತು. ಸಿನಿಮಾ ಪ್ರಚಾರ ನಡೆಸದಂತೆ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಕಾರ್ಯಕರ್ತರು ಗುರುವಾರ ಅವರನ್ನು ತಡೆದಿದ್ದರು.

ಸಿದ್ಧಾರ್ಥ್‌ ನಟನೆಯ ‘ಚಿಕ್ಕು’ ಸಿನಿಮಾ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಗುರುವಾರ ಬಿಡುಗಡೆಗೊಂಡಿದೆ. ಇದರ ಕನ್ನಡ ಅವತರಣಿಕೆಯ ಮಾಧ್ಯಮ ಪ್ರದರ್ಶನ ಮತ್ತು ಪತ್ರಿಕಾಗೋಷ್ಠಿಯನ್ನು ಮಲ್ಲೇಶ್ವರದ ಎಸ್​ಆರ್​ವಿಯಲ್ಲಿ ಸಿನಿಮಾ ತಂಡ ಹಮ್ಮಿಕೊಂಡಿತ್ತು. ಸುದ್ದಿಗೋಷ್ಠಿ ವೇಳೆ ಏಕಾಏಕಿ ನುಗ್ಗಿದ ಕರವೇ ಕಾರ್ಯಕರ್ತರು ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ನಟನ ಪತ್ರಿಕಾಗೋಷ್ಠಿಗೂ ಅಡ್ಡಿಪಡಿಸಿದರು.

ವೇದಿಕೆ ಮೇಲೆ ನಟ ಸಿದ್ಧಾರ್ಥ್ ಮಾತನಾಡುತ್ತಿರುವ ಸಂದರ್ಭದಲ್ಲಿ ನುಗ್ಗಿದ ಕಾರ್ಯಕರ್ತರು, ‘ಕಾವೇರಿ ವಿವಾದ ಕಾವೇರಿರುವ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರಚಾರ ಮಾಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಟ ಸಿದ್ಧಾರ್ಥ್, ಕನ್ನಡದಲ್ಲಿಯೇ ಸಿನಿಮಾದ ಕುರಿತು ಮಾತನಾಡಲು ಪ್ರಯತ್ನಿಸಿದರು. ಆದರೆ ಕರವೇ ಕಾರ್ಯಕರ್ತರು ಅದಕ್ಕೆ ಅವಕಾಶ ನೀಡಲಿಲ್ಲ.

ಕಾರ್ಯಕರ್ತರ ಮಾತಿಗೆ ಮಣಿದ ನಟ ಪತ್ರಿಕಾಗೋಷ್ಠಿ ಮೊಟುಕುಗೊಳಿಸಿ ಹೊರಟರು. ಮಾಧ್ಯಮ ಪ್ರತಿನಿಧಿಗಳ ಸಂಧಾನದ ಫಲವಾಗಿ ಬಳಿಕ ಯೋಜನೆಯಂತೆ ಚಿತ್ರಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT