ಕನ್ನಡದಲ್ಲಿ ಒಂದು ಭಕ್ತಿ ಪ್ರಧಾನ ಚಲನಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದರ ಹೆಸರು ‘ಶ್ರೀ ಅಥರ್ವಣ ಪ್ರತ್ಯಂಗಿರಾ’. ಇದು ಅಂಗಾಳ ಪರಮೇಶ್ವರಿ ಅಮ್ಮನವರ ಕುರಿತ ಸಿನಿಮಾ. ಇದು ಮಾರ್ಚ್ 22ಕ್ಕೆ ತೆರೆಗೆ ಬರುವ ನಿರೀಕ್ಷೆ ಇದೆ. ಚಿತ್ರದ ಬಗ್ಗೆ ಮಾಹಿತಿ ನೀಡಲು ಸಿನಿಮಾ ತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು.
ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಣ ಸಪ್ತಗಿರಿ ಅಮ್ಮ (ಏಳುಮಲೈ ಸ್ವಾಮೀಜಿ) ಅವರದ್ದು. ಪ್ರತ್ಯಂಗಿರಾ ದೇವಿಯ ಪಾತ್ರ ನಿಭಾಯಿಸಿದ್ದು ಚೆನ್ನೈನ ಅನು ಕೃಷ್ಣ. ‘ನಾನು ಕೇರಳದವಳು. ಈಗ ಚೆನ್ನೈನಲ್ಲಿ ನೆಲೆಸಿದ್ದೇನೆ. ನಾನು ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರದಲ್ಲಿಯೇ ದೇವಿಯ ಪಾತ್ರ ನಿಭಾಯಿಸಿದ್ದು ಖುಷಿ ತಂದಿದೆ’ ಎಂದರು ಅನು.
ಈ ಚಿತ್ರದಲ್ಲಿ ಐದು ಹಾಡುಗಳು ಇವೆಯಂತೆ. ಬ್ರಹ್ಮಾಂಡ ಗುರೂಜಿ ಅವರೂ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನಟಿ ರಾಧಿಕಾ ಕುಮಾರಸ್ವಾಮಿ ಅವರು ಕಾಳಿ ಪಾತ್ರ ಹಾಕಿದ ನಂತರ ದೃಷ್ಟಿ ತೆಗೆದಿರಲಿಲ್ಲ. ನಂತರ ಅವರ ಬೆನ್ನು ಮೂಳೆಗೆ ಏಟಾಯಿತು’ ಎಂದರು ಬ್ರಹ್ಮಾಂಡ ಗುರೂಜಿ.
‘ಹೆಣ್ಣುಮಕ್ಕಳು ಋತುಸ್ರಾವದ ಅವಧಿಯಲ್ಲಿ ಹೋಗಬಾರದ ಜಾಗಕ್ಕೆ, ಹೋಗಬಾರದ ಸಮಯದಲ್ಲಿ ಹೋದರೆ ಏನಾಗುತ್ತೆ ಎಂಬುದನ್ನು ಈ ಸಿನಿಮಾದಲ್ಲಿನ ಒಂದು ಪಾತ್ರ ಹೇಳುತ್ತದೆ’ ಎಂದರು ಸಪ್ತಗಿರಿ ಅಮ್ಮ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲು ಒಟ್ಟು ಎರಡು ವರ್ಷಗಳು ಬೇಕಾದವು ಎಂದೂ ಅವರು ಹೇಳಿಕೊಂಡರು.