ಚಿತ್ರದುರ್ಗ: ಪ್ರಸ್ತುತ ನಿಮಗೆ ನೀಡಿರುವ ಹುದ್ದೆ ಚಿಕ್ಕದಾದರೂ ಪರಿಣಾಮ ಅಗಾಧವಾಗಿದೆ. ಜವಾಬ್ದಾರಿ ಅರಿತು ಕೆಲಸ ಮಾಡಿದಲ್ಲಿ ಮುಂದೆ ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಸಲಹೆ ನೀಡಿದರು.ಇಲ್ಲಿನ ಪತ್ರಿಕಾ ಭವನದಲ್ಲಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಚಿತ್ರದುರ್ಗ, ಮೊಳಕಾಲ್ಮುರು ಹಾಗೂ ಚಿತ್ರದುರ್ಗ ಜಿಲ್ಲಾ ಮಾಧ್ಯಮ ಕಾರ್ಯದರ್ಶಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಆದೇಶ ಪತ್ರ ನೂತನ ಪದಾಧಿಕಾರಿಗಳಿಗೆ ವಿತರಿಸಿದ ನಂತರ ಮಾತನಾಡಿದರು.
‘ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಪಕ್ಷದೊಳಗಿನ ಎಲ್ಲರೂ ಮುಂದಾಗಬೇಕಿದೆ. ಅದರಲ್ಲೂ ಪ್ರಚಾರ ಸಮಿತಿಯ ಪಾತ್ರ ಅತಿ ಮುಖ್ಯವಾಗಿದೆ. ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಮುಂದಿನ ಬಾರಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್ ಮಾತನಾಡಿ, ‘ಚುನಾವಣೆ ಹತ್ತಿರ ಇದೆ. ಕೆಲಸ ಮಾತ್ರ ಬಹಳಷ್ಟಿದೆ. ನಿಮಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ಮಾಡಿ, ಬೂತ್ ಮಟ್ಟದಲ್ಲಿ ಮತದಾರರಿಗೆ ಪಕ್ಷದ ಕಾರ್ಯಕ್ರಮಗಳನ್ನು ತಿಳಿಸುವ ಮೂಲಕ ಕಾಂಗ್ರೆಸ್ ಬಗ್ಗೆ ಅವರಲ್ಲಿ ಒಲವು ಹೆಚ್ಚಿಸುವಂತೆ ಮಾಡಬೇಕು’ ಎಂದರು.
ಮುಖಂಡ ರಾಮಪ್ಪ ಮಾತನಾಡಿ, ‘ಪಕ್ಷಕ್ಕಾಗಿ ದುಡಿದ ನನ್ನನ್ನು ಗುರುತಿಸಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ವಿಧಾನಸಭಾ ಚುನಾವಣೆ ನಂತರ ಈ ಚುನಾವಣೆ ಬರಲಿದೆ. ಯಾವ ಚುನಾವಣೆಗಳಾಗಲಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ, ನಿಮ್ಮೆಲ್ಲರ ಗುರಿಯಾಗಿರಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಜಿ.ಎಸ್. ಮಂಜುನಾಥ್, ದಾವಣಗೆರೆ ಸಮಿತಿ ಅಧ್ಯಕ್ಷ ಸುಭಾಷ್, ಮುಖಂಡರಾದ ಸೇತುರಾಂ, ತಿಪ್ಪೇಸ್ವಾಮಿ, ಗೀರೀಶ್, ಎನ್.ಡಿ. ಕುಮಾರ್, ಸುಬ್ಬಯ್ಯ ಇದ್ದರು.