'ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಲು ನಾನಲ್ಲಿಗೆ ಹೋಗಿದ್ದೆನೇ ಹೊರತು ಚಿತ್ರದ ಪ್ರಚಾರಕ್ಕಾಗಿ ಅಲ್ಲ’. ಇದು ಬಾಲಿವುಡ್ ನಟ ಜಾನ್ ಅಬ್ರಾಹಂ ಅವರ ಸ್ಪಷ್ಟನೆ.
‘ವರ್ಲ್ಡ್ ಕಪ್ ಇನ್ ಇಂಡಿಯಾ’ ರಾಯಭಾರಿ ಆಗಿರುವ ಜಾನ್, ಈಚೆಗೆ ವಿಶ್ವಕಪ್ ಫುಟ್ಬಾಲ್ ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಟೀಕೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
‘ಫುಟ್ಬಾಲ್ ಕುರಿತು ಭಾರತದ ನಟನೊಬ್ಬ ಮೊದಲ ಬಾರಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾನೆ ಎಂದರೆ ಸಹಜವಾಗಿಯೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಆದರೆ, ನನ್ನ ಉದ್ದೇಶ ಪ್ರಾಮಾಣಿಕವಾಗಿತ್ತು. ಅಲ್ಲಿ ನಾನೊಬ್ಬ ಕ್ರೀಡಾ ಪ್ರೇಮಿಯಾಗಿ ಪಾಲ್ಗೊಂಡಿದ್ದೆನೇ ಹೊರತು ನಟನಾಗಿ ಅಲ್ಲ’ ಎಂದಿದ್ದಾರೆ.
‘ಚಿತ್ರರಂಗದ ಹಲವರು ನನಗೆ ಕರೆ ಮಾಡಿ, ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ನಮ್ಮ ಕ್ಷೇತ್ರದ ಯಾರು ಕೂಡ ಇಂತಹ ಕೆಲಸ ಮಾಡಿರಲಿಲ್ಲ ಎಂದು ಹೊಗಳಿದ್ದಾರೆ’ ಎಂದಿದ್ದಾರೆ.
‘ಕ್ರೀಡೆಯನ್ನು ಬೆಳೆಸಲು ಕೆಳಮಟ್ಟದಿಂದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಅಗತ್ಯವಿದೆ. ಉದಾಹರಣೆಗೆ: ಶಿಲ್ಲಾಂಗ್ ಲಾಜಾಂಗಾಂಗ್ ಹೆಸರಿನ ನನ್ನ ಕ್ಲಬ್ ಇದೆ. ಈಶಾನ್ಯ ಭಾರತದಲ್ಲಿ ಇದು ಬಹಳ ಜನಪ್ರಿಯ. ಒಂಬತ್ತರಿಂದ ಇಪ್ಪತ್ತು ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ತರಬೇತಿ ನೀಡುತ್ತೇವೆ. ಇದರಿಂದ ನಮ್ಮ ದೇಶೀಯ ಕ್ರೀಡೆಗಳ ಗುಣಮಟ್ಟ ಹೆಚ್ಚುತ್ತದೆ. ಈ ರೀತಿ ಮಾಡಿದರೆ ಸಹಜವಾಗಿಯೇ ಭಾರತದಲ್ಲಿ ಕ್ರೀಡೆ ಬೆಳೆಯುತ್ತದೆ’ ಎಂದೂ ಹೇಳಿದ್ದಾರೆ.