ನಿರ್ದೇಶಕ ಪ್ರಶಾಂತ್ ರಾಜ್ ‘ದಳಪತಿ’ ಸಿನಿಮಾದೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದು ಪಕ್ಕಾ ಆ್ಯಕ್ಷನ್ ಚಿತ್ರ ಎಂದು ಸಿನಿತಂಡ ಹೇಳಿದೆ.
ಸಿನಿಮಾ ಬಿಡುಗಡೆಗೂ ಮೊದಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ‘ಇದು ವಿಭಿನ್ನವಾಗಿರುವ ಚಿತ್ರ. ನಾಯಕನಾಗಿ ಅಭಿನಯಿಸುವಂತೆ ಪ್ರೇಮ್ ಅವರನ್ನು ಸಂಪರ್ಕಿಸಿದಾಗ ಅವರು ಇನ್ನೊಂದು ಸಿನಿಮಾ ಕೆಲಸದಲ್ಲಿ ತೊಡಗಿದ್ದಿದ್ದು ಗೊತ್ತಾಯಿತು. ನಾಯಕಿ ಕೃತಿ ಕರಬಂದ ಕೂಡ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ತುಸು ಸಮಯದ ನಂತರ ಇವರಿಬ್ಬರ ಸಮಯ ಹೊಂದಾಣಿಕೆ ಮಾಡಿಕೊಂಡು ಚಿತ್ರೀಕರಣ ಪೂರ್ಣಗೊಳಿಸಲಾಯಿತು’ ಎಂದರು ಪ್ರಶಾಂತ್.
ರಾಮಾಯಣ ಮತ್ತು ಮಹಾಭಾರತದಿಂದ ಕೆಲವು ಅಂಶಗಳನ್ನು ಆಯ್ಕೆ ಮಾಡಿಕೊಂಡು ಎಂ.ಎಸ್.ರಮೇಶ್ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರಂತೆ. ಶರತ್ ಲೋಹಿತಾಶ್ವ, ಚಿಕ್ಕಣ್ಣ, ಪದ್ಮಜಾ ರಾವ್ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.
‘ಪ್ರೀತಿಯನ್ನು ಉಳಿಸಿಕೊಳ್ಳಲು ಯತ್ನಿಸುವ, ಕೆಲವು ಪರಿಸ್ಥಿತಿಗಳು ಎದುರಾದಾಗ ಅವಳಿಗಾಗಿ ಉಗ್ರನಾಗುವ’ ಪಾತ್ರ ಪ್ರೇಮ್ ಅವರದ್ದಂತೆ. ಅವರು ಈ ಸಿನಿಮಾದಲ್ಲಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರದ ಒಂದು ದೃಶ್ಯದಲ್ಲಿ ಕೃತಿ ಅವರು ಆಯುಧ ಕೈಗೆತ್ತಿಕೊಂಡಿದ್ದಾರಂತೆ. ನವೀನ್ ಅವರು ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ.
ಈ ವಾರ ತೆರೆಗೆ ಬರಲಿರುವ ಸಿನಿಮಾಗಳು
‘ದಳಪತಿ’
ಪ್ರಶಾಂತ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ‘ದಳಪತಿ’. ಇದಕ್ಕೆ ಚರಣ್ರಾಜ್ ಸಂಗೀತ ನೀಡಿದ್ದಾರೆ. ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ವಿ.ರವಿಚಂದ್ರ ಸಂಕಲನವೂ ಈ ಚಿತ್ರಕ್ಕಿದೆ. ತಾರಾಬಳಗದಲ್ಲಿ ಪ್ರೇಮ್, ಕೃತಿ ಕರಬಂಧ, ಚಿಕ್ಕಣ್ಣ, ಕೃಷಿ ತಾಪಂಡ, ಶರತ್ ಲೋಹಿತಾಶ್ವ, ಶ್ರೀನಿವಾಸ ಪ್ರಭು, ಪದ್ಮಜಾರಾವ್ ಮುಂತಾದವರಿದ್ದಾರೆ. ನವೀನ್ ಅವರು ನಿರ್ಮಿಸಿದ್ದಾರೆ.
‘ಸೀಜರ್’
ವಿನಯ್ ಕೃಷ್ಣ ನಿರ್ದೇಶಿಸಿರುವ ಚಿತ್ರ ‘ಸೀಜರ್’.ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡಿದ್ದಾರೆ. ಚಿರಂಜೀವಿ ಸರ್ಜಾ, ಪಾರುಲ್ ಯಾದವ್, ರವಿಚಂದ್ರನ್, ಪ್ರಕಾಶ್ ರೈ ಮುಖ್ಯಭೂಮಿಕೆಯಲ್ಲಿದ್ದಾರೆ. ಚಂದನ್ ಶೆಟ್ಟಿ ರಾಗ ಸಂಯೋಜಿಸಿದ್ದಾರೆ.
ಅಂಜಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಾಗಿನೇನಿ ವೆಳ್ಳಂಕಿ, ರವಿ ಪ್ರಕಾಶ್, ಡ್ಯಾನಿ ಕುಟ್ಟಪ್ಪ, ರಮೇಶ್ ಭಟ್, ಶೋಭರಾಜ್, ಸುಚೀಂದ್ರ ಪ್ರಸಾದ್, ಹನುಮಂತೇ ಗೌಡ ತಾರಾಗಣದಲ್ಲಿದ್ದಾರೆ.
‘ಅಬ್ಬೆ ತುಮಕೂರು ಸಿದ್ಧಿಪುರುಷ ವಿಶ್ವಾರಾಧ್ಯರು’
ಓಂ ಸಾಯಿಪ್ರಕಾಶ್ ನಿರ್ದೇಶನದ ಚಿತ್ರವಿದು. ವಿಶ್ವಾರಾಧ್ಯರ ಪಾತ್ರವನ್ನು ನಟ ರಾಮ್ಕುಮಾರ್ ನಿಭಾಯಿಸಿದ್ದಾರೆ. ಶ್ರುತಿ, ರಮೇಶ್ ಭಟ್, ಹರೀಶ್ ರಾಜ್, ಸಾಧುಕೋಕಿಲ, ತಾರಾಗಣದಲ್ಲಿದ್ದಾರೆ. ಇದು ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ 99ನೇ ಚಿತ್ರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.