ಬಾಲಿವುಡ್ಗೆ ಪರಿಚಯಿಸಲು ಪ್ರಸ್ತಾಪ ಮುಂದಿರಿಸಿದ್ದೇ ಸಲ್ಮಾನ್ ಖಾನ್. ಅವರ ಚಿತ್ರದಲ್ಲಿ ಪಾತ್ರ ವಹಿಸಲು ಕೇಳಿದ್ದರು. ಆದರೆ ಆಗ ಕ್ಯಾಮೆರಾ ಎದುರಿಸಲು ನಾನು ಸಿದ್ಧಳಾಗಿರಲಿಲ್ಲ. ಆ ಅವಕಾಶವನ್ನು ತಿರಸ್ಕರಿಸಿದ್ದೆ. ಆದರೆ ಈಗ ನಟಿಸುವಾಸೆ ಇದ್ದರೂ ಸಮಯ ಕೂಡಿಬರುತ್ತಿಲ್ಲ’ ಎಂದು ದೀಪಿಕಾ ತಮ್ಮಾಸೆಯನ್ನು ಬಿಚ್ಚಿಟ್ಟಿದ್ದಾರೆ.
ಸಲ್ಮಾನ್ಗೆ ತಾವು ಕೃತಜ್ಞರು ಎಂದೂ ದೀಪಿಕಾ ಹೇಳುತ್ತಾರೆ. ಸಿನಿಮಾ ಸಾಧ್ಯತೆಯನ್ನು ಯೋಚಿಸುವಂತೆ ಮಾಡಿದ್ದು ಇದೇ ಪ್ರಸ್ತಾಪ ಎಂದಿರುವ ಅವರು ಆ ನಂತರ ಫರ್ಹಾ ಖಾನ್ ನಿರ್ದೇಶನದ ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಇದೀಗ ಸೈಫ್ ಅಲಿ ಖಾನ್, ರಣಬೀರ್ ಕಪೂರ್ ಮುಂತಾದವರೊಂದಿಗೆ ನಟಿಸಿರುವ ದೀಪಿಕಾ ತಾವು ಸಲ್ಮಾನ್ ಜೊತೆಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನಮಗಾಗಿಯೇ ವಿಶೇಷವಾದ ಅವಕಾಶವೊಂದು ಕಾದಿರಬಹುದು. ಅದಕ್ಕಾಗಿಯೇ ವಿಧಿ ಇಷ್ಟು ದಿವಸಗಳವರೆಗೆ ಕಾಯಿಸುತ್ತಿದೆ ಎಂದೂ ದೀಪಿಕಾ ಮುಂಬೈನಲ್ಲಿ ಹೇಳಿಕೊಂಡಿದ್ದಾರೆ.
‘ಚೆನ್ನೈ ಎಕ್ಸ್ಪ್ರೆಸ್’, ‘ರೇಸ್ 2’, ‘ಯೇ ಜವಾನಿ ಹೈ ದಿವಾನಿ’ ಚಿತ್ರಗಳ ನಟನೆಗಾಗಿ ಜನರಿಂದ ಪ್ರಶಂಸೆಗೆ ಪಾತ್ರರಾಗಿರುವ ದೀಪಿಕಾಗೆ ಯಾರಾದರೂ ಹೊಗಳಿದರೆ ಮುಜುಗರವಾಗುತ್ತದಂತೆ. ಇದೀಗ ‘ರಾಮ್ ಲೀಲಾ’ ಚಿತ್ರವು ಅವರಿಗೆ ವಿಶೇಷ ಅನುಭವ ನೀಡಿದೆಯಂತೆ.
ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಕೆಲಸ ಮಾಡುವಾಗ ದೈಹಿಕ, ಬೌದ್ಧಿಕವಾಗಿ ಅಷ್ಟೇ ಅಲ್ಲ, ಭಾವನಾತ್ಮಕವಾಗಿಯೂ ತೊಡಗಿಸಿಕೊಳ್ಳಬೇಕಾದುದು ಅನಿವಾರ್ಯವಾಗಿತ್ತು. ನಟನೆಯಲ್ಲಿ ತನ್ಮಯಳಾಗುವವರೆಗೂ ಬಿಡುತ್ತಿರಲಿಲ್ಲ. ಇದೇ ಕಾರಣದಿಂದ ವಿಶೇಷ ಪ್ರೇಮಕತೆಗಳನ್ನು ನೀಡಲು ಸಾಧ್ಯವಾಗಿದೆ ಎನ್ನುತ್ತಾರೆ ದೀಪಿಕಾ.
‘ಹಮ್ ದಿಲ್ ದೇಚುಕೆ ಸನಮ್’, ‘ದೇವದಾಸ್’ಗಿಂತಲೂ ಭಿನ್ನವಾಗಿರುವ ಕತೆ ಇದು ಎಂದು ಹೇಳುತ್ತಾರೆ. ರಜನಿಕಾಂತ್ ಜೊತೆಗಿನ ಅನುಭವವೂ ಅನನ್ಯವಾಗಿತ್ತು. ಸೆಟ್ನಲ್ಲಿ ಅವರ ಕಲಿಕೆಯ ತುಡಿತ ನನ್ನಲ್ಲಿ ಹೊಸ ಹುಮ್ಮಸ್ಸು ತುಂಬಿತು ಎಂದಿರುವ ದೀಪಿಕಾ, ರಾಮ್ಲೀಲಾ ಚಿತ್ರದಲ್ಲಿ ಸಂಜಯ್ ಜೊತೆಗೆ ಕೆಲಸ ಮಾಡಿದ ನಂತರ ಸಲ್ಮಾನ್ ಜೊತೆಗೆ ಕೆಲಸ ಮಾಡುವಾಸೆ ಇದೆ ಎಂದು ಹೇಳಿದ್ದಾರೆ.