ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರವನ್ನು ನಿಷೇಧಿಸಬೇಕೆಂದು ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು ಆಗ್ರಹಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ನಟಿ ದೀಪಿಕಾ ಪಡುಕೋಣೆ,‘ಪದ್ಮಾವತಿ ಸಿನಿಮಾ ಬಿಡುಗಡೆಯನ್ನು ತಡೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.
ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಹಾಗೂ ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಡಿಸೆಂಬರ್ 1ರಂದು ಬಿಡುಗಡೆಯಾಗಲಿದೆ.
ಒಬ್ಬ ಮಹಿಳೆಯಾಗಿ, ಸಿನಿಮಾದ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಚಿತ್ರದ ಕಥೆಯಲ್ಲಿ ಯಾವುದನ್ನು ಹೇಳಬಹುದೋ ಅದನ್ನು ಹೇಳುತ್ತೇನೆ. ಇದು ಅವಶ್ಯಕ ಎಂದು ಹೇಳಿದ್ದಾರೆ.
ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ಥಾನದ ಕೆಲ ಸಂಘಟನೆಗಳು ಆರೋಪಿಸಿದ ಕಾರಣ ವಿವಾದ ಸೃಷ್ಟಿಯಾಗಿತ್ತು. ಚಿತ್ರದ ಕತೆಯು ರಜಪೂತ ರಾಣಿ ಪದ್ಮಾವತಿ ಹಾಗೂ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಸುತ್ತ ಸುತ್ತುತ್ತದೆ.
ಮಹಾರಾಷ್ಟ್ರದ ಬಿಜೆಪಿ ಮುಖಂಡ ಪ್ರವಾಸೋದ್ಯಮ ಸಚಿವ ಜಯಕುಮಾರ್ ರಾವಲ್ ಅವರು ಚಿತ್ರ ನಿಷೇಧಕ್ಕೆ ಈ ಮೊದಲು ಆಗ್ರಹಿಸಿದ್ದರು. ಸಚಿವ ರಾವಲ್ ಅವರು ’ಪದ್ಮಾವತಿ‘ಯ ಗಂಡ ರಾವಲ್ ರತನ್ ಸಿಂಗ್ ಅವರ ವಂಶಸ್ಥರು ಕೂಡಾ. ಮಹಾರಾಷ್ಟ್ರ ಮುಖ್ಯಮಂತ್ರಿ ಫಡಣವೀಸ್ ಅವರನ್ನು ಭೇಟಿಯಾಗಿದ್ದ ರಾವಲ್, ಇತಿಹಾಸದಲ್ಲಿ ಸತ್ಯ ಘಟನೆಗಳನ್ನು ಹೇಗೆ ತಿರುಚಲಾಗಿದೆ ಎಂದು ವಿವರಿಸಿದ್ದರು.
‘ಪದ್ಮಾವತಿ’ ಸಿನಿಮಾ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಸಿನಿಮಾವನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತ್ತು.
‘ಈ ಸಿನಿಮಾವನ್ನು ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ(ಸೆನ್ಸಾರ್) ಸಲ್ಲಿಸಲಾಗಿದೆಯೇ, ಮಂಡಳಿ ಪ್ರಮಾಣಪತ್ರ ನೀಡಿದೆಯೇ’ ಎಂದು ವಿಚಾರಣೆಯ ಆರಂಭದಲ್ಲಿಯೇ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಪ್ರಶ್ನಿಸಿತು. ಮಂಡಳಿಯ ಪ್ರಮಾಣಪತ್ರ ಸಿಕ್ಕಿರುವ ಸಿನಿಮಾ ಬಿಡುಗಡೆ ತಡೆಯುವುದು ಸಾಧ್ಯವಿಲ್ಲ’ ಎಂದು ಹೇಳಿತು.