ವೆಂಕಟೇಶ್ ನಿರ್ಮಾಣದ ‘ಹಾಲು ತುಪ್ಪ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಪಾಂಡವಪುರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದ್ದು ಶೀಘ್ರದಲ್ಲೇ ಹಾಡುಗಳನ್ನು ಬಿಡುಗಡೆ ಮಾಡಲು ತಂಡ ಸಿದ್ಧತೆ ನಡೆಸಿದೆ. ಶಶಾಂಕ್ ರಾಜ್ ನಿರ್ದೇಶಕರು.
ಇಂದ್ರಸೇನಾ ಸಂಗೀತ, ಆರ್.ವಿ. ನಾಗೇಶ್ವರ ರಾವ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ನಾಗರಾಜ್ ನೃತ್ಯ ಸಂಯೋಜನೆ ಹಾಗೂ ಬಾಬು ಖಾನ್ ಕಲಾ ನಿರ್ದೇಶನ, ದೆಲೀಪ್ ದಿಲ್ಸೇ ಗೀತರಚನೆ, ಎ.ಆರ್. ಸಾಯಿರಾಂ ಸಂಭಾಷಣೆ ಇದೆ. ಸೆಂಚುರಿ ಗೌಡ, ಗಡ್ಡಪ್ಪ, ಪವನ್, ಮೌನ, ಹೊನ್ನವಳ್ಳಿ ಕೃಷ್ಣ, ನಾಗರಾಜ ಕೋಟೆ, ಬಸವರಾಜ್ ಕಟ್ಟಿ, ಜಯರಾಂ, ಕುರಿ ಸುನೀಲ್ ತಾರಾಗಣದಲ್ಲಿದ್ದಾರೆ.
‘ರಾಜ್ ವಿಷ್ಣು’ಗೆ ವಿಶೇಷ ಹಾಡು
‘ನನ್ನೋಡುದ್ರೆ ಧೂಳ್, ಕಣ್ಣೋಡುದ್ರೆ ಧೂಳ್...’ ಎಂಬ ವಿಶೇಷ ಹಾಡಿನ ಚಿತ್ರೀಕರಣದ ಮೂಲಕ ರಾಮು ನಿರ್ಮಾಣದ ‘ರಾಜ್ ವಿಷ್ಣು’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಸೆಟ್ ಹಾಕಿ ನಾಲ್ಕು ದಿನ ಚಿತ್ರೀಕರಣ ನಡೆಸಿದ ಈ ಯುಗಳ ಗೀತೆಯಲ್ಲಿ ಶರಣ್ ಮತ್ತು ವೈಭವಿ ನಟಿಸಿದ್ದಾರೆ. ಮುರಳಿ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.
ತಮಿಳಿನ ‘ರಜನಿ ಮುರುಘ’ ಚಿತ್ರದ ಕಥೆ ‘ರಾಜ್ ವಿಷ್ಣು’ ಚಿತ್ರಕ್ಕೆ ಸ್ಫೂರ್ತಿ. ಕೆ. ಮಾದೇಶ್ ನಿರ್ದೇಶನದ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಕಥೆ, ಚಿತ್ರಕಥೆ ಇದೆ. ಚಿತ್ರದ ಮಾತಿನ ಜೋಡಣೆ, ಕಂಪ್ಯೂಟರ್ ಗ್ರಾಫಿಕ್ಸ್ ಅಳವಡಿಕೆ ಕೆಲಸವೂ ಪೂರ್ಣವಾಗಿದ್ದು ಸದ್ಯವೇ ಚಿತ್ರ ತೆರೆಗೆ ಬರಲಿದೆ.
ಅರ್ಜುನ್ ಜನ್ಯ ಸಂಗೀತ, ರಾಜೇಶ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು, ವಿನೋದ್ ಸಾಹಸ ಸಂಯೋಜನೆ, ಯೋಗರಾಜ್ ಭಟ್, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಗೀತರಚನೆ, ರಘು ನಿಡುವಳ್ಳಿ ಸಂಭಾಷಣೆ ಇದೆ. ಶರಣ್, ಚಿಕ್ಕಣ್ಣ, ವೈಭವಿ, ಸಾಧು ಕೋಕಿಲ, ರವಿಶಂಕರ್, ಶ್ರೀನಿವಾಸಮೂರ್ತಿ, ವೀಣಾ ಸುಂದರ್, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ, ಸ್ವಾತಿ ಇತರರ ತಾರಾಗಣವಿದೆ.
‘ಶಿರಡಿ ಸಾಯಿ’ ಟೀಸರ್ ಬಂತು
ಮಚ್ಸಾ ರಾಮಲಿಂಗ ರೆಡ್ಡಿ ನಿರ್ಮಿಸುತ್ತಿರುವ ‘ಪ್ರತ್ಯಕ್ಷ ದೈವ ಶಿರಡಿ ಸಾಯಿ’ ಚಿತ್ರದ ಟೀಸರ್ನ್ನು ಈಚೆಗೆ ಅನಾವರಣ ಮಾಡಲಾಯಿತು. ಕೆ.ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ಸಾಯಿಬಾಬ ಪಾತ್ರವನ್ನು ನಿರ್ಮಾಪಕರೇ ನಿರ್ವಹಿಸಿದ್ದಾರೆ. ಭಾನುಚಂದರ್, ಸೀತಾ ನಗರಕರ್, ವಿಜೇತ, ಶ್ರೀಕೃಷ್ಣ ರಮೇಶ್, ಸತೀಶ್, ಸ್ವಾಮಿ ನಾಯ್ಡು, ಪ್ರಶಾಂತಿ, ರಜನಿ, ಶಶಿಕಲಾ ನಟಿಸಿದ್ದಾರೆ. ಸೂರ್ಯ ಛಾಯಾಗ್ರಹಣ, ಕಿಶನ್ ಸಂಗೀತ, ಜೆ.ಬಿ. ರಾಮರಾವ್ ಸಂಕಲನ, ರವಿರಾಜ್ ಗೀತರಚನೆ ಇದೆ.
‘ಕ್ಷೌರದಂಗಡಿ’ಯಲ್ಲಿ ಪ್ರೀತಿ
ಕ್ಷೌರದ ಅಂಗಡಿಯ ಸುತ್ತವೇ ಪ್ರೇಮಕಥೆಯನ್ನು ಹೆಣೆದಿರುವ ಚಿತ್ರ ‘ಕತ್ರಿಗುಪ್ಪೆ ಕಟಿಂಗ್ ಶಾಪ್’. ಶ್ರೀಮಂತ ಹುಡುಗಿ ಮತ್ತು ಕ್ಷೌರಿಕ ಹುಡುಗನ ನಡುವಿನ ಪ್ರೇಮವೇ ಈ ಚಿತ್ರದ ಕಥಾವಸ್ತು. ಪ್ರಖ್ಯಾತ್ ಈ ಚಿತ್ರದ ನಿರ್ದೇಶಕರು.
ಕ್ಯಾಥರಿನ್ ಚಿತ್ರದ ನಾಯಕಿ. ಪ್ರಕಾಶ್ ರೈ, ಜಗಪತಿ ಬಾಬು, ಚರಣ್ ರಾಜ್, ಕರಿಸುಬ್ಬು, ಪದ್ಮಜಾ ರಾವ್ ಇತರರು ತಾರಾಗಣದಲ್ಲಿದ್ದಾರೆ. ಎ. ಮಂಜು ನಿರ್ಮಾಪಕರು. ಕಾರ್ತಿಕ್ ಚಾವ್ಲಾ ಛಾಯಾಗ್ರಹಣ, ರಾಘವೇಂದ್ರ ಹಡಪದ್ ಸಂಗೀತ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು ಸಾಹಸ ಹಾಗೂ ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜನೆ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.