ಮೊದಲ ಭಾಗದಲ್ಲಿ, ಜೂನಿಯರ್ ಆರ್ಟಿಸ್ಟ್ ಆಗಿದ್ದ ಅನಿಲ(ಶರಣ್), ರಾಮ ಜೊಯೀಸ್(ಸಾಯಿಕುಮಾರ್) ಹಾಗೂ ಸುಶೀಲ(ಭವ್ಯಾ) ದಂಪತಿಯ ಮಗನಾಗಿ ನಟಿಸುತ್ತಿರುತ್ತಾನೆ. ರಾಮ ಜೋಯೀಸರ ನಿಜವಾದ ಪುತ್ರ ‘ಕರ್ಣ’(ಶ್ರೀನಗರ ಕಿಟ್ಟಿ) ಕುಮಾರನಾಗಿ ಮನೆಗೆ ಬಂದ ನಂತರ ಅನಿಲ ಮನೆಯಿಂದ ಹೊರಬೀಳುತ್ತಾನೆ. ಕ್ಲೈಮ್ಯಾಕ್ಸ್ನಲ್ಲಿ ‘ಅನಿಲ’ ಒಬ್ಬ ಮಾಟಗಾರ ಎನ್ನುವುದು ತಿಳಿಯುತ್ತದೆ. ರಾಮ ಜೋಯೀಸರ ಮನೆಯಲ್ಲಿ ಅಷ್ಟದಿಗ್ಬಂಧನ ಹಾಕಿ ಇಟ್ಟಿದ್ದ ತ್ರಿಶಂಕು ಮಣಿ ಪಡೆಯಲು ‘ಕುಮಾರ’ ನಡೆಸುವ ಮಂತ್ರ–ತಂತ್ರಗಳಿಂದ ಎರಡನೇ ಭಾಗದ ಕಥೆ ಆರಂಭವಾಗುತ್ತದೆ. ಇಲ್ಲಿ ಅನಿಲ ಹೇಗೆ ಮಾಟಗಾರನಾದ, ಮಂತ್ರ–ತಂತ್ರಗಳನ್ನು ಕಲಿಸುವ ಬಿಸ್ತಾಕ್ಕೆ ಹೇಗೆ ಸೇರಿದ, ಅಲ್ಲಿ ಬಿಸ್ತಾದ ದೊರೆ ದಾರಕನಿಗೆ(ಅಶುತೋಷ್ ರಾಣಾ) ಆತ ಮಾಡಿದ್ದೇನು, ರಾಮ ಜೋಯೀಸರ ಮನೆಯಲ್ಲಿ ಇರುವ ತ್ರಿಶಂಕು ಮಣಿಗೂ ಅನಿಲನಿಗೂ ಇರುವ ಸಂಬಂಧವೇನು, ದಾರಕ ತ್ರಿಶಂಕು ಮಣಿ ಪಡೆಯುತ್ತಾನೆಯೇ ಎನ್ನುವುದನ್ನು ಎರಡನೇ ಭಾಗದಲ್ಲಿ ತೋರಿಸಲಾಗಿದೆ.