ಮುಂಬೈ : ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದ ರೌಡಿಶೀಟರ್ ವಿಕಾಸ ದುಬೆ ಕುರಿತು ವೆಬ್ ಸರಣಿಯನ್ನು ನಿರ್ದೇಶಿಸಲು ಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ಧರಿಸಿದ್ದಾರೆ.
ಜುಲೈ 3ರಂದು ನಡೆದಿದ್ದ ಘಟನೆಯಲ್ಲಿ ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ವಿಕಾಸ ದುಬೆ, ಬೆಂಬಲಿಗರು ಗುಂಡಿನ ದಾಳಿ ನಡೆಸಿದ್ದು ಡಿ.ಎಸ್.ಪಿ. ಸೇರಿ ಎಂಟು ಪೊಲೀಸರು ಸತ್ತಿದ್ದರು. ಜುಲೈ 10ರಂದು ಎನ್ ಕೌಂಟರ್ ನಲ್ಲಿ ದುಬೆ ಹತನಾಗಿದ್ದ. ದುಬೆ ಕುರಿತ ಮಾಹಿತಿ ನೀಡಿದ್ದವರಿಗೆ ರೂ.5 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ರೌಡಿಶೀಟರ್ ಕುರಿತ ವೆಬ್ ಸರಣಿ ಚಿತ್ರಿಸುವ ಹಕ್ಕನ್ನು ಪೊಲರಾಯ್ಡ್ ಮೀಡಿಯಾ ಸಹಯೋಗದಲ್ಲಿ ನಿರ್ಮಾಪಕ ಶೈಲೇಶ್ ಆರ್.ಸಿಂಗ್ ಅವರ ಕರ್ಮಾ ಮೀಡಿಯಾ ಅಂಡ್ ಎಂಟರಟೇನ್ ಮೆಂಟ್ ಪಡೆದುಕೊಂಡಿದೆ. ಮೆಹ್ತಾ ಅವರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ಶಾಹೀದ್' ಹಾಗೂ 'ಅಲಿಘರ್', 'ಒಮೆರ್ತಾ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಇದು, ಪೊಲೀಸರು ಅಪರಾಧ ಜಗತ್ತು ಮತ್ತು ನೀತಿ ನಿರೂಪಕರ ನಡುವೆ ಇರುವ ಸಂಪರ್ಕವನ್ನು ಬಿಂಬಿಸಲಿದ್ದು, ನಿರೂಪಿಸಲು ಕುತೂಹಲಕರವಾದ ಕಥನವನ್ನು ಒಳಗೊಂಡಿದೆ ಎಂದು ನಿರ್ದೇಶಕರು ಈ ಕುರಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.