ಮನುಷ್ಯನ ಜೀವನ ಎನ್ನುವುದು ಕ್ಷಣಿಕ. ಇಂದು ಇರುವವನು ನಾಳೆ ಇರುತ್ತಾನೋ ಇಲ್ಲವೋ. ಇರುವಷ್ಟು ದಿನ ಸದಾ ಸಂತೋಷದಿಂದ ಬದುಕಬೇಕು. ಬರೀ ನಾನು ನನ್ನದು ಎಂಬ ಸ್ವಾರ್ಥಕ್ಕಿಂತ ನಮ್ಮದು ಎಂಬ ಭಾವವನ್ನು ಮೂಡಿಸಿಕೊಳ್ಳಬೇಕು. ಸದಾ ಇನ್ನೊಬ್ಬರ ಕೊರತೆಯನ್ನು ಕಂಡುಹಿಡಿಯುವ ಮೊದಲು ನಿಮ್ಮೊಳಗೆ ಇರುವ ನ್ಯೂನತೆಯನ್ನು ಮೊದಲು ಸರಿಪಡಿಸಿಕೊಳ್ಳಿ. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ; ಸರ್ವಜ್ಞರಲ್ಲ.
ಎಲ್ಲರೂ ಎಲ್ಲಾ ವಿಷಯದಲ್ಲೂ ಪರಿಪೂರ್ಣರಾಗಿರಬೇಕು ಎಂಬುದೇನು ಇಲ್ಲ. ನನಗೆ ಇದು ತಿಳಿದಿದೆ ಎಂದರೆ ಪ್ರತಿಯೊಬ್ಬರಿಗೂ ಇದು ತಿಳಿಯಲೇಬೇಕು ಎಂದಿಲ್ಲ. ನನಗೆ ತಿಳಿಯದ ಅದೆಷ್ಟೋ ವಿಷಯಗಳು ಅವರಿಗೆ ತಿಳಿದಿರಬಹುದು.
ಹೀಗೆ ಯೋಚಿಸಿದರೆ ಖಂಡಿತ ನಮಗೆ ಇನ್ನೊಬ್ಬರ ಬಗ್ಗೆ ಅಸಹನೆ ಮೂಡುವುದಿಲ್ಲ. ಸದಾ ನಿಮ್ಮೊಳಗೆ ನೀವು ಕೊರಗಿಕೊಳ್ಳುವುದು ಒಳ್ಳೆಯದಲ್ಲ. ನನಗೇನೂ ತಿಳಿದಿಲ್ಲ, ನಾನೇನು ಮಾಡೇ ಇಲ್ಲ ಎಂಬ ಕೀಳರಿಮೆ ಕೂಡ ಮನುಷ್ಯನನ್ನು ಒಳಗೊಳಗೆ ಸಾಯುವಂತೆ ಮಾಡುತ್ತದೆ. ಕೀಳರಿಮೆ ಬೆಳೆಸಿಕೊಳ್ಳುವ ಬದಲು ಕಲಯುವ ಪ್ರಯತ್ನ ಮಾಡಿ. ಒಮ್ಮೆ ಸಾಧ್ಯವಾಗದಿದ್ದರೆ ಮತ್ತೊಮ್ಮೆ ಪ್ರಯ್ನತಿಸಿ.
ಹೀಗೆ ಮಾಡಿ ಮಾಡಿ ಒಂದಲ್ಲ ಒಂದು ದಿನ ನೀವು ನಿಮ್ಮನ್ನೇ ಮೆಚ್ಚುವಷ್ಟು ಬೆಳೆಯಬಹುದು. ಇನ್ನೊಬ್ಬರನ್ನು ಆಡಿಕೊಳ್ಳುವ ಮೊದಲು ಯೋಚಿಸಿ. ನೀವು ಅವರನ್ನು ಆಡಿಕೊಳ್ಳುವಂತೆ ಇನ್ನೊಂದಿಷ್ಟು ಜನ ನಿಮ್ಮನ್ನೂ ಆಡಿಕೊಳ್ಳಬಹುದು. ಅದು ನಿಮಗೆ ತಿಳಿದರೆ ಆಗುವ ನೋವೇ ಅವರಿಗೂ ಆಗುತ್ತದೆ ಎಂಬುದನ್ನು ತಿಳಿಯಿರಿ.
ಚಾಡಿ ಹೇಳುವ ಅಭ್ಯಾಸದಿಂದ ದೂರವಿರಿ. ಇನ್ನೊಬ್ಬರ ಬಗ್ಗೆ ಅದೆಷ್ಟೇ ಅಸಮಾಧಾನವಿರಲಿ. ಅವರ ಎದುರಿಗೆ ಹೇಳಿ. ಆ ಕ್ಷಣಕ್ಕೆ ಅವರಿಗೆ ಬೇಸರವಾಗಬಹುದು. ಆದರೆ ಅವರು ಅದರ ಬಗ್ಗೆ ಯೋಚಿಸಿ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬಹುದು. ಅದು ಬಿಟ್ಟು ಇನ್ನೊಬ್ಬರ ಬಳಿ ಚಾಡಿ ಹೇಳಿ ನಿಮ್ಮ ಬಗ್ಗೆ ಅವರಿಗೆ ಗೌರವ ಕಡಿಮೆಯಾಗುವಂಯತೆ ಮಾಡಬೇಡಿ. ಬೇರೆಯವರ ಚಾರಿತ್ರ್ಯದ ಬಗ್ಗೆ ಮಾತನಾಡಬೇಡಿ. ಚಾರಿತ್ರ್ಯವಧೆ ಮಾಡುವ ಸ್ವಾತ್ರಂತ್ಯ ಯಾರಿಗೂ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.