ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ಛೆರೋಗಕ್ಕೂ ಇದೆ ಸೂಕ್ತ ಪರಿಹಾರ

Last Updated 16 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮೂರ್ಛೆರೋಗ ಅಥವಾ ಅಪಸ್ಮಾರವು ಮೆದುಳಿನ ತೀವ್ರ ಅಸ್ವಸ್ಥತೆಯ ಸ್ಥಿತಿಯಾಗಿದ್ದು ಯಾವುದೇ ವಯಸ್ಸಿನವರನ್ನು ಬಾಧಿಸಬಹುದು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಪ್ರಕಾರ ಮೂರ್ಛೆರೋಗವು ಅತ್ಯಂತ ಸಾಮಾನ್ಯ ನರಸಂಬಂಧಿ ರೋಗವಾಗಿದೆ. ಜಗತ್ತಿನಲ್ಲಿ ಐದು ಕೋಟಿ ಜನರು ಇದರಿಂದ ಬಳಲುತ್ತಿದ್ದಾರೆ. ವಿಶ್ವದಾದ್ಯಂತ ಪ್ರತಿವರ್ಷ ಅಂದಾಜು 24 ಲಕ್ಷ ಜನರುಇದಕ್ಕೆ ಸೇರ್ಪಡೆಯಾಗುತ್ತಾರೆ.

ಮೂರ್ಛೆರೋಗ (ಅಪಸ್ಮಾರ) ಎಂದರೆ ಏನು?

ಮೆದುಳಿನ ವಿದ್ಯುತ್ ಚಟುವಟಿಕೆಯಲ್ಲಿ ಆಗುವ ಸರಳ ವ್ಯತ್ಯಯವೇ (ಸಿಂಪಲ್ ಆ್ಯಬೆರೆಷನ್) ಮೂರ್ಛೆರೋಗ. ಮೆದುಳಿಗೆ ಹಾನಿ ಉಂಟು ಮಾಡುವಂತಹ ಹಲವಾರು ಕಾರಣಗಳಿಂದಾಗಿ ಈ ತೊಂದರೆ ತಲೆದೋರಬಹುದು. ಇದು ಚಯಾಪಚಯ ವ್ಯವಸ್ಥೆಯಲ್ಲಿನ ತೊಂದರೆ, ಸೋಂಕು, ರಕ್ತನಾಳ ಸಮಸ್ಯೆ ಮತ್ತು ಮೆದುಳಿನ ಗಡ್ಡೆಯ ರೂಪದಲ್ಲಿಯೂ ವ್ಯಕ್ತವಾಗಬಹುದು. ಇಂತಹ ಸಂದರ್ಭದಲ್ಲಿ ಕಂಡುಬರುವ ಮೂರ್ಛೆರೋಗವನ್ನು ಪ್ರೇರಿತ ಮೂರ್ಛೆರೋಗ (ಸೆಕೆಂಡರಿ ಎಪಿಲೆಪ್ಸಿ) ಎನ್ನಲಾಗುತ್ತದೆ. ಕಾರಣ ಅದೇನೇ ಆಗಿದ್ದರೂ ಮೂರ್ಛೆರೋಗದ ಲಕ್ಷಣಗಳು ಕಂಡುಬಂದವರನ್ನು ಸೂಕ್ತವಾಗಿ ತಪಾಸಣೆಗೆ ಒಳಪಡಿಸಿ, ರೋಗ ದೃಢೀಕರಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ.

ಸೆಳೆತ ಪ್ರಮುಖ ಲಕ್ಷಣ

ಜೋರಾದ ಚೀರುವಿಕೆಯ ಜೊತೆ ಬಾಯಿಯಲ್ಲಿ ನೊರೆ ಹೊರಬಂದು ಅಲ್ಪ ಕಾಲದವರೆಗೆ ಪ್ರಜ್ಞಾಹೀನತೆ ಉಂಟಾಗುತ್ತದೆ. ದೇಹವಿಡೀ ನಡುಗಬಹುದು.

ಇದೇ ವೇಳೆ, ಮುಖದ ಭಾಗ ಸೇರಿದಂತೆ ಕೈ ಅಥವಾ ಕಾಲುಗಳು ಅನಿಯಂತ್ರಿತವಾಗಿ ಚಲಿಸುತ್ತವೆ. ಮುಖವು ಒಂದು ಕಡೆಗೆ ವಾಲಿಕೊಂಡು ಕಣ್ಣು ಗುಡ್ಡೆಗಳು ಮೇಲ್ಮುಖವಾಗಿ ತಿರುಗುತ್ತವೆ. ಇದು ದೇಹದ ಯಾವುದಾದರೂ ಒಂದು ಭಾಗಕ್ಕೆ ಮಾತ್ರ ಆಗಬಹುದಾಗಿದ್ದು, ಆಗ ಇದನ್ನು ಭಾಗಶಃ ಸೆಳವು ಎನ್ನಬಹುದು. ಹೀಗೆ ಸೆಳತವು (ಸೀಝರ್) ಪದೇ ಪದೇ ಮರುಕಳಿಸುವುದನ್ನು ಮೂರ್ಛೆರೋಗ ಎನ್ನಲಾಗುತ್ತದೆ. ಮಕ್ಕಳಲ್ಲಿ ಈ ಸೆಳೆತ ಬಂದಾಗ ಅದರೊಟ್ಟಿಗೆ ಜ್ವರ ಕಾಣಿಸಿಕೊಳ್ಳಬಹುದು (ಫೆಬ್ರೈಲ್ ಕನವಲ್‌ಷನ್ಸ್). ಜೊತೆಗೆ ಸಂಕೀರ್ಣ ಸಮಸ್ಯೆಗಳು ಕೂಡ ಇರಬಹುದು. ಇದು ಹಲವಾರು ಸಂವೇದಕ ಚಟುವಟಿಕೆಗಳಿಂದ ಪ್ರಚೋದಿತವಾಗಬಹುದು (ರಿಫ್ಲೆಕ್ಸ್ ಎಪಿಲೆಪ್ಸಿ).

ಮೂರ್ಛೆರೋಗದ ಕಾರಣಗಳು

ಇಡಿಯೋಪಥಿಕ್ ಎಪಿಲೆಪ್ಸಿಗೆ ನಿರ್ದಿಷ್ಟ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ. ಆದರೂ, ಆನುವಂಶೀಯವಾಗಿ ಬಂದ ತೊಂದರೆ ಮತ್ತು ಮೆದುಳಿನ ಬೆಳವಣಿಗೆಯಲ್ಲಾಗುವ ಅಸಹಜತೆಗಳು ಇದಕ್ಕೆ ಕಾರಣವೆನ್ನಲಾಗಿದೆ. ತಲೆಗೆ ಬಿದ್ದ ಪೆಟ್ಟು, ಪಾರ್ಶ್ವವಾಯು, ಮೆದುಳುಗಡ್ಡೆ, ಬ್ರೈನ್ ಹೆಮರೇಜ್ (ಮೆದುಳಿನಲ್ಲಿ ರಕ್ತಸ್ರಾವ), ಮೆದುಳಿನ ರಕ್ತನಾಳಗಳ ದೋಷಪೂರ್ಣ ರಚನೆ, ಶಿಶುಜನನದ ವೇಳೆ ಆಗುವ ಗಾಯ, ಸೋಂಕುಗಳು, ಮೆದುಳಿನಲ್ಲಿನ ಚಯಾಪಚಯ ಮತ್ತು ಆನುವಂಶೀಯತೆಗಳು ರೋಗಕ್ಕೆ (ಜೆನೆಟಿಕ್ ಸಿಂಡ್ರೋಮ್‌ಗಳು) ಕಾರಣವಾಗಬಹುದು.

ಲಭ್ಯವಿರುವ ಚಿಕಿತ್ಸೆಗಳು

ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಣಾಮಕಾರಿ ಔಷಧಿಗಳನ್ನು ನೀಡುವುದರಿಂದ ಅಪಸ್ಮಾರವನ್ನು (ಮೂರ್ಛೆರೋಗ) ಸಂಪೂರ್ಣವಾಗಿ ನಿಯಂತ್ರಿಸಬಹುದು ಅಥವಾ ನಿವಾರಿಸಬಹುದು. ಈ ಸಮಸ್ಯೆಗೆ ತುತ್ತಾದವರು ನಿಗದಿತ ಅವಧಿಯವರೆಗೆ ಕ್ರಮಬದ್ಧವಾಗಿ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ತೀರಾ ವಿರಳ ಪ್ರಕರಣಗಳಲ್ಲಿ ಮೂರ್ಛೆರೋಗವು ಮೆದುಳು ಹಾನಿಗೆ ಸಂಬಂಧಿಸಿದ ಸಿಂಡ್ರೋಮ್ ಆಗಿದ್ದು, ಅನಿಯಂತ್ರಿತ ಮೂರ್ಛೆರೋಗವಾಗಿ ಸವಾಲೊಡ್ಡಬಹುದು. ಇಂತಹ ಸಮಸ್ಯೆ ಇರುವವರನ್ನು ಹೆಚ್ಚಿನ ಪರಿಶೋಧನೆಗೆ ಒಳಪಡಿಸಿದ ನಂತರ ಯಾವ ರೀತಿಯ ಶಸ್ತ್ರಚಿಕಿತ್ಸೆ ಅಗತ್ಯ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಮೆದುಳಿಗೆ ಕಾಯಂ ಆಗಿ ಹಾನಿಯಾಗುವುದನ್ನು ತಪ್ಪಿಸುವ ಸಲುವಾಗಿ ಈ ನಿರ್ಧಾರವನ್ನು ಆದಷ್ಟು ಬೇಗನೆ ತೆಗೆದುಕೊಳ್ಳಬೇಕಾಗುತ್ತದೆ.

ಮುನ್ನೆಚ್ಚರಿಕೆ ಅಗತ್ಯ

* ಕೆಲವು ಮುನ್ನೆಚ್ಚರಿಕೆ ಕ್ರಮಗಳಿಂದ ಈ ರೋಗ ಬಾರದಂತೆ ತಡೆಗಟ್ಟುವ ಸಾಧ್ಯತೆ ಇದೆ. ಅವು ಯಾವುವೆಂದರೆ:

* ಸುರಕ್ಷಿತ ವಾಹನ ಚಾಲನೆ ಹಾಗೂ ತಲೆಗೆ ಪೆಟ್ಟು ಬೀಳದಂತೆ ಎಚ್ಚರಿಕೆ ವಹಿಸುವುದು.

* ಹೆರಿಗೆ ಅವಧಿಯಲ್ಲಿ (ಮಗು ಹುಟ್ಟುವುದಕ್ಕೆ 5 ತಿಂಗಳು ಮುಂಚೆ ಹಾಗೂ ನಂತರದ ಒಂದು ತಿಂಗಳ ಪೆರಿನೇಟಲ್ ಅವಧಿ) ಮೆದುಳಿಗೆ ಆಮ್ಲಜನಕ ಅಥವಾ ರಕ್ತದ ಪೂರೈಕೆಯಲ್ಲಿ ಕೊರತೆಯಾಗದಂತೆ ನಿಗಾ ವಹಿಸಿ ಪ್ರಮುಖ ಭಾಗಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು.

* ಮೆದುಳಿನ ಆಘಾತ (ಪಾರ್ಶ್ವವಾಯು ಮತ್ತು ಬ್ರೈನ್ ಹೆಮರೇಜ್) ಆಗದಂತೆ ಜಾಗ್ರತೆ ವಹಿಸುವುದು.

* ಯಾವುದೇ ಬಗೆಯ ನರಸಂಬಂಧಿ ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವುದು.

* ಬ್ರೈನ್ ಹೆಮರೇಜ್‌ಗೆ (ಮೆದುಳಿನಲ್ಲಿ ರಕ್ತಸ್ರಾವಕ್ಕೆ) ಕಾರಣವಾಗುವ ಎಲ್ಲಾ ಬಗೆಯ ನಂಜುಕಾರಕಗಳ ಸೇವನೆಯನ್ನು ತೊರೆಯುವುದು.

* ನಿಯಮಿತ ವ್ಯಾಯಾಮ, ಆಹಾರಕ್ರಮ ಮತ್ತು ನಿದ್ದೆಯಿಂದ ಕೂಡಿದ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು.

* ಕೆಲವು ಪ್ರಕರಣಗಳಲ್ಲಿ ಮಾತ್ರ ಮೂರ್ಛೆರೋಗವು ಎಲ್ಲಾ ಅತ್ಯುತ್ತಮ ವೈದ್ಯೋಪಚಾರಗಳ ನಂತರವೂ ಅನಿಯಂತ್ರಿತವಾಗಿ ಉಳಿಯಬಹುದು. ಒಂದೊಮ್ಮೆ ಸೂಕ್ತ ಚಿಕಿತ್ಸೆ ಕೊಡಿಸಲು ಆರಂಭಿಸಿದ ಎರಡು ವರ್ಷಗಳ ನಂತರವೂ ಮೂರ್ಛೆರೋಗವು ಉಳಿದುಕೊಂಡರೆ ಅದನ್ನು ರಿಫ್ರ್ಯಾಕ್ಟೀವ್ ಎಪಿಲೆಪ್ಸಿ ಎನ್ನಲಾಗುತ್ತದೆ. ಮೂರ್ಛೆರೋಗವನ್ನು ಆದಷ್ಟು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸುವುದರಿಂದ ಮೆದುಳಿಗೆ ಹೆಚ್ಚಿನ ಹಾನಿಯಾಗದಂತೆ ತಡೆಯಬಹುದು. ಅಸಹಜ ಮೆದುಳಿನಿಂದ ಉಂಟಾಗುವ ಮೂರ್ಛೆರೋಗದ ಮೂಲವನ್ನು ಈಗ ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಪತ್ತೆ ಹಚ್ಚಬಹುದು. ಮೂರ್ಛೆರೋಗಕ್ಕೆ ದೀರ್ಘಕಾಲ ಚಿಕಿತ್ಸೆ ನೀಡದೇ ಹೋದರೆ ಮೆದುಳು ಪುನಃ ಸರಿಪಡಿಸಲಾಗದಷ್ಟು ಹಾನಿಗೀಡಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಅಧಿಕ ಪ್ರಮಾಣದ ಔಷಧ ಸೇವಿಸುವುದು ಅನಿವಾರ್ಯವಾಗಿ, ಇದು ಬದುಕಿನ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರಬಹುದು.

* ಮೂರ್ಛೆರೋಗದ ಮೂಲವು ಮೆದುಳಿನ ಸುರಕ್ಷಿತ ವಲಯದಲ್ಲಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಅಥವಾ ಸಂಪರ್ಕ ಕಡಿತಗೊಳಿಸುವ ಮೂಲಕ ಸೆಳೆತವನ್ನು ನಿಯಂತ್ರಿಸಿ ಅಸಹಜ ಚಟವಟಿಕೆ ತಲೆದೋರದಂತೆ ಅಥವಾ ಅದರ ಪ್ರಸರಣ ಆಗದಂತೆ ತಡೆಯಬಹುದು. ಶೇ 60ರಷ್ಟು ಮೂರ್ಛೆ ರೋಗ ಪ್ರಕರಣಗಳನ್ನು ಶಸ್ತ್ರಚಿಕಿತ್ಸೆ ಮೂಲಕ ನಿಯಂತ್ರಿಸಿ ಬದುಕಿನ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ. ಒಂದೊಮ್ಮೆ ಮೂರ್ಛೆರೋಗದ ಮೂಲವು ಮೆದುಳಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗದ ಜಾಗದಲ್ಲಿದ್ದರೆ ಆಗ ರೋಗದ ತೀವ್ರಗೆ ತಗ್ಗಿಸುವ ಉಪಶಾಮಕ ವಿಧಾನಗಳನ್ನು ಅನುಸರಿಸಬಹುದು.

ಲೇಖಕರು ಮುಖ್ಯ ನ್ಯೂರೊಸರ್ಜನ್‌, ಬ್ರೇನ್ಸ್‌ ಆಸ್ಪತ್ರೆ, ಬೆಂಗಳೂರು

**

ಅನುಭವ

ಆರು ವರ್ಷದ ಮಗುವೊಂದು ದಿನಕ್ಕೆ ಎರಡು-ಮೂರು ಬಾರಿ ಸೀಝರ್‌ಗೆ (ನಡುಕದಿಂದ ಕೂಡಿದ ಸೆಳವಿಗೆ) ತುತ್ತಾಗಿ ಪ್ರಜ್ಞೆ ಕಳೆದುಕೊಂಡು ಕೆಳಕ್ಕೆ ಬೀಳುತ್ತಿತ್ತು. ಆರಂಭದಲ್ಲಿ ಆ ಮಗುವಿಗೆ ಆ್ಯಂಟಿಎಪಿಲೆಪ್ಟಿಕ್‌ಗಳನ್ನು ನೀಡಿ ಉಪಚರಿಸಲಾಯಿತು. ಇದು ಮೊದಲಿಗೆ ಪರಿಣಾಮಕಾರಿಯಾಗಿತ್ತು. ಆದರೆ ಕ್ರಮೇಣ ಇದರ ಪರಿಣಾಮ ದುರ್ಬಲಗೊಂಡು ಹೆಚ್ಚುವರಿ ಔಷಧಿ ಮತ್ತು ಔಷಧಿ ಪ್ರಮಾಣ ಹೆಚ್ಚಿಸಿ ನೀಡಿದರೂ ಸೆಳೆತ ನಿಯಂತ್ರಣಕ್ಕೆ ಬರಲಿಲ್ಲ. ಇದರ ಜೊತೆಗೆ ಮಗುವಿನಲ್ಲಿ ಅಸಹಜ ವರ್ತನೆ ಮತ್ತು ಮಿತಿಮೀರಿದ ಚಟುವಟಿಕೆ (ಹೈಪರ್ ಆ್ಯಕ್ಟಿವಿಟಿ) ಕಾಣಿಸಿಕೊಳ್ಳತೊಡಗಿತು. ಇದು ಮೆದುಳಿನ ಕೆಳಶಿರಗುಳಿ (ಹೈಫೋಥೆಲ್ಯಾಮಿಕ್) ವಲಯದಲ್ಲಿ ಹುಟ್ಟಿನಿಂದಲೇ ಕಂಡುಬರುವ ಸಮಸ್ಯೆ. ಸೂಕ್ತ ತಪಾಸಣೆ ನಂತರ ಮಗುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಈ ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಸ್ಥಿತಿ ಬಲುಬೇಗ ಸುಧಾರಣೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT