ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಚಲ ಮನದ ನೋವಿನ ಮಾತು

Last Updated 1 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ನಾನು ಓದಲು ಕುಳಿತರೆ ನನ್ನ ದೇಹ ಮಾತ್ರ ಕುಳಿತಲ್ಲೇ ಇರುತ್ತದೆ. ಆದರೆ, ಮನಸ್ಸು ವಾಸ್ತವ ಪ್ರಪಂಚ ಬಿಟ್ಟು ಬೇರೆಡೆಗೆ ಹೋಗಿರುತ್ತದೆ. ಅದು ಸದಾ ಎಲ್ಲೆಲ್ಲೋ ಸಂಚರಿಸುತ್ತಿರುತ್ತದೆ. ಬೇರೆ ಬೇರೆ ಆಲೋಚನೆಗಳು ಮನಸ್ಸನ್ನು ಮುತ್ತಿಕೊಳ್ಳುತ್ತವೆ. ಸದಾ ನಕಾರಾತ್ಮಕ ಯೋಚನೆಗಳೇ ತುಂಬಿರುತ್ತವೆ. ಇದಕ್ಕೆ ಪರಿಹಾರವೇನು?

ಹೆಸರು, ಊರು ಬೇಡ

ಒಂದೆಡೆಯಿಂದ ಮತ್ತೊಂದೆಡೆಗೆ ಅಲೆದಾಡುತ್ತಲೇ ಇರುವುದು ಮನಸ್ಸಿನ ರೂಢಿ. ಮನಸ್ಸು ಸದಾ ಯೋಚಿಸುತ್ತದೆ, ಬೇಸರಗೊಳ್ಳುತ್ತದೆ, ಪ್ರಶ್ನೆಗಳನ್ನು ಕೇಳುತ್ತದೆ, ಉತ್ತರಿಸುತ್ತದೆ, ಕ್ಷಮೆ ನೀಡುತ್ತದೆ, ಕತೆಗಳನ್ನು ಹೇಳುತ್ತದೆ, ಕಲ್ಪನೆ ಮಾಡಿಕೊಳ್ಳುತ್ತದೆ, ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಹಾಗೂ ಪರಿಹರಿಸುತ್ತದೆ. ಅಲೆದಾಡುವ ಮನಸ್ಸು ನಿಮ್ಮಿಂದ ಒಳ್ಳೆಯ ನಿದ್ದೆಯನ್ನು ಕಸಿದುಕೊಳ್ಳಬಹುದು. ಮನಸ್ಸಿನ ತೊಳಲಾಟ ನಿಮ್ಮ ಕೆಲಸಗಳನ್ನು ಸರಿಯಾಗಿ ಮುಗಿಸಲು ಬಿಡುವುದಿಲ್ಲ. ಇದರಿಂದ ನಿಮ್ಮ ಸಮಯ ಹಾಗೂ ಶಕ್ತಿ ಎರಡೂ ವ್ಯರ್ಥವಾಗುತ್ತದೆ. ಜೊತೆಗೆ ಸುಸ್ತು ಆವರಿಸುತ್ತದೆ. ‌‌

ಇದು ಖಂಡಿತ ಒಳ್ಳೆಯ ಲಕ್ಷಣ ಅಲ್ಲ. ಇದರಿಂದ ನಿಮ್ಮ ಸಂಪೂರ್ಣ ಜೀವನದ ಉದ್ದೇಶವೇ ಬುಡಮೇಲಾಗುತ್ತದೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಒಂದು ಮಾರ್ಗವೆಂದರೆ ಹೆಚ್ಚು ಹೆಚ್ಚು ಅಭ್ಯಾಸ ಮಾಡುವುದು. ಸತತ ಪರಿಶ್ರಮ ಹಾಗೂ ತಾಳ್ಮೆ ಬೆಳೆಸಿಕೊಳ್ಳುವುದು. ಸದ್ಯದ ಘಟನೆಯ ಮೇಲೆ ಮನಸ್ಸನ್ನು ಸ್ಥಿರವಾಗಿರಿಸಿಕೊಳ್ಳುವ ಅಭ್ಯಾಸವನ್ನು ಪ್ರಯ್ನತಿಸುವುದೇ ಇದಕ್ಕಿರುವ ಉತ್ತಮ ಪರಿಹಾರ. ನಿರಂತರ ಪರಿಶ್ರಮವನ್ನು ಬೇಸರ ಹಾಗೂ ದಣಿವಿನ ಟಾಸ್ಕ್‌ ಎಂದುಕೊಂಡು ಬಿಡುವ ಹಾಗಿಲ್ಲ.

ನೀವು ಒಮ್ಮೆ ಒಂದು ಟಾಸ್ಕ್ ಮಾಡಿದರೆ, ಅದನ್ನು ತುಂಬಾ ಪರಿಣಾಮಕಾರಿಯಾಗಿ, ಸುಲಭವಾಗಿ ಹಾಗೂ ಬೇಗನೆ ಮುಗಿಸಬಹುದು. ಚಿತ್ತಚಾಂಚಲ್ಯದಿಂದ ಪಾರಾಗಲು ಇರುವ ಮತ್ತೊಂದು ದಾರಿಯೆಂದರೆ ಧ್ಯಾನ. ಧ್ಯಾನದಿಂದ ಮನಸ್ಸನ್ನು ವಿಧೇಯವಾಗಿ ಹಾಗೂ ಶಿಸ್ತಿನಿಂದ ಇರಿಸಿಕೊಳ್ಳಬಹುದು. ಯಾವಾಗ ನಿಮ್ಮ ಮನಸ್ಸು ವಿಧೇಯವಾಗಿ ಶಿಸ್ತಿನಿಂದ ಇರುತ್ತದೋ ಆಗ ಅದು ಎಲ್ಲೆಲ್ಲೋ ಅಲೆದಾಡುವುದನ್ನು ನಿಲ್ಲಿಸುತ್ತದೆ ಮತ್ತು ನೀವು ಶಾಂತ ರೀತಿಯಿಂದ ಇರಬಹುದು. ನೀವು ಏನು ಮಾಡುತ್ತೀರೋ ಆ ಕೆಲಸಕ್ಕೆ ನಿಮ್ಮ ಮನಸ್ಸನ್ನು ಹೊಂದಿಸಿಕೊಳ್ಳಿ. ಒಂದು ಕೆಲಸವನ್ನು ಮಾಡುವಾಗ ಬೇರೆ ಕೆಲಸದ ಬಗ್ಗೆ ಯೋಚನೆ ಮಾಡಬೇಡಿ. ಆ ತರಹ ಮನಸ್ಸು ಚಂಚಲವಾದರೆ ಮತ್ತೆ ನಿಮ್ಮ ಹಿಡಿತಕ್ಕೆ ತಂದುಕೊಳ್ಳಿ. ಇದು ಸುಲಭವಲ್ಲ, ಆದರೆ ಸತತ ಪ್ರಯತ್ನ ಮಾಡಿದರೆ ಖಂಡಿತ ಯಶಸ್ಸು ಸಾಧ್ಯ. ‌

ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ವೈಯಕ್ತಿಕ ಕಾರಣದಿಂದಾಗಿ ಇಷ್ಟು ದಿನ ಅಭ್ಯಾಸ ಮಾಡಿಲ್ಲ. ಈಗ ಪರೀಕ್ಷೆ ಸಮೀಪಿಸುತ್ತಿದೆ. ಇದರಿಂದ ಈಗ ನನಗೆ ಒತ್ತಡ ಹೆಚ್ಚಿದೆ. ನನ್ನ ಒತ್ತಡವನ್ನು ಹೇಗೆ ಕಡಿಮೆ ಮಾಡಿಕೊಳ್ಳಲಿ. ಪರೀಕ್ಷೆಯನ್ನು ಚೆನ್ನಾಗಿ ಹೇಗೆ ಮಾಡಲಿ.

ಅಭಿಜತ್, ಮಸೂತಿ

ಖಂಡಿತವಾಗಲೂ ನಿಮಗೆ ಸಮಯ ತುಂಬಾ ಕಡಿಮೆ ಇದೆ. ಇನ್ನು ಉಳಿದಿರುವುದು ಕನಿಷ್ಠ ಒಂದು ತಿಂಗಳು. ಪುಸ್ತಕ ತೆರೆದಿಟ್ಟುಕೊಂಡು ಪ್ರಶ್ನೆಪತ್ರಿಕೆಯನ್ನು ಬಿಡಿಸಲು ಪ್ರಯತ್ನಿಸಿ. ನೀವು ತರಗತಿಯಲ್ಲಿ ಪಾಠಗಳನ್ನು ಗಮನವಿಟ್ಟು ಕೇಳಿದ್ದೀರಿ ಎಂದುಕೊಂಡಿದ್ದೇನೆ. ಹಾಗಾಗಿ ಎಲ್ಲವೂ ನಿಮಗೆ ಹೊಸತಲ್ಲ. ಮೊದಲ ವಾರದಲ್ಲಿ ಪ್ರತಿದಿನ ಒಂದೇ ವಿಷಯ ಅಥವಾ ಭಿನ್ನ ವಿಷಯದ ಐದು ಪ್ರಶ್ನೆಪತ್ರಿಕೆಗಳನ್ನು ತೆರೆದ ಪುಸಕ್ತದೊಂದಿಗೆ ಬಿಡಿಸಿ. ಎರಡನೇ ವಾರದಲ್ಲಿ ಪುಸ್ತಕವನ್ನು ಮುಚ್ಚಿಟ್ಟು ಪ್ರಶ್ನೆಪತ್ರಿಕೆಯನ್ನು ಬಿಡಿಸಲು ಪ್ರಯ್ನತಿಸಿ. ಇದರಂತೆ ಮಾಡಿದಾಗ ಅದು ನಿಮ್ಮನ್ನು ಪರೀಕ್ಷೆಗೆ ತಯಾರು ಮಾಡುತ್ತದೆ. ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಪರೀಕ್ಷೆಗಳನ್ನು ಚೆನ್ನಾಗಿ ಮಾಡಿ. ನಿಮಗೆ ಒಳ್ಳೆಯದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT