ರಾಮನಗರ: ಸ್ಥಳ ಮಹಜರಿಗೆ ಕರೆದೊಯ್ದಿದ್ದಾಗ ಹೆಡ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಬೆಂಗಳೂರಿನ ಜೆ.ಪಿ. ನಗರದ ರೌಡಿಶೀಟರ್ ಸೋಮೇಶ ಅಲಿಯಾಸ್ ಸೋಮ (50) ಎಂಬಾತನ ಕಾಲಿಗೆ ಕಗ್ಗಲಿಪುರ ಠಾಣೆ ಪೊಲೀಸರು ಶನಿವಾರ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಆತನನ್ನು ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಡಿ. 5ರಂದು ಕಗ್ಗಲಿಪುರ ಠಾಣೆ ವ್ಯಾಪ್ತಿಯಲ್ಲಿರುವ ಕೆರೆ ಏರಿ ಮೇಲೆ ಅಪರಿಚಿತ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸೋಮನನ್ನು ವಶಕ್ಕೆ ಪಡೆದು ಸ್ಥಳ ಮಹಜರಿಗಾಗಿ ಕರೆದೊಯ್ದಿದ್ದರು. ಮಾರ್ಗಮಧ್ಯೆ ಆನೇಕಲ್ ರಸ್ತೆಯ ಮುಳಕಮಲೆ ಬಳಿ ಸೋಮ ಹೆಡ್ ಕಾನ್ಸ್ಟೆಬಲ್ ಮಡೆಯಪ್ಪ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ.
ಆತನನ್ನು ತಡೆಯಲು ಯತ್ನಿಸಿದ ಇತರ ಸಿಬ್ಬಂದಿ ಮೇಲೂ ಹಲ್ಲೆಗೆ ಮುಂದಾದಾಗ, ಇನ್ಸ್ಪೆಕ್ಟರ್ ಸುಂದರ್ ಅವರು ಸೋಮನ ಕಾಲಿಗೆ ಗುಂಡು ಹಾರಿಸಿದರು. ಸೋಮನ ವಿರುದ್ಧ ಜೆಪಿ. ನಗರ, ಮಡಿವಾಳ, ಮೈಕೊ ಲೇಔಟ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ ಸೇರಿದಂತೆ 15 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.