ಇಂಫಾಲ್: ಮಣಿಪುರದಲ್ಲಿ ಹದಿಮೂರು ಬಂಡುಕೋರರು ಶಸ್ತ್ರಾಸ್ತ್ರಗಳ ಸಮೇತ ಗುರುವಾರ ಮುಖ್ಯಮಂತ್ರಿ ಎನ್. ಬೈರೆನ್ ಸಿಂಗ್ ಅವರ ಮುಂದೆ ಶರಣಾದರು.
ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿ-ಪೀಪಲ್ಸ್ ವಾರ್ ಗ್ರೂಪ್ (ಕೆಸಿಪಿ-ಪಿಡಬ್ಲ್ಯುಜಿ) ಗೆ ಸೇರಿದ 12 ಮಂದಿ ಹಾಗೂ ಕಾಂಗ್ಲೈ ಯಾವೊಲ್ ಕಾಂಬ ಲುಪ್ (ಕೆವೈಕೆಎಲ್) ಗೆ ಸೇರಿದ ಓರ್ವ ಬಂಡುಕೋರ ಶರಣಾಗಿದ್ದಾರೆ.
ಮಣಿಪುರ ರೈಫಲ್ಸ್ ಕಾಂಪ್ಲೆಕ್ಸ್ನಲ್ಲಿ ಮಾತನಾಡಿದ ಬೈರೆನ್ ಸಿಂಗ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಶಾಂತಿಗೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ವಿವಿಧ ಬಂಡುಕೋರ ಗುಂಪುಗಳನ್ನು ತೊರೆದು ಮುಖ್ಯ ವಾಹಿನಿಗೆ ಬರುತ್ತಿದ್ದಾರೆ ಎಂದರು.
ಎಲ್ಲ ಬಂಡುಕೋರರಿಗೆ ಶಾಂತಿ ಮಾತುಕತೆ ಮೂಲಕ ಮುಖ್ಯ ವಾಹಿನಿಗೆ ಬರುವಂತೆ ವಿನಂತಿಸುತ್ತಿದ್ದೇನೆ. ಶರಣಾಗುವ ಬಂಡುಕೋರರ ಮೇಲೆ ಒಂದೇ ಒಂದು ಗುಂಡು ಹಾರಬಾರದು ಮತ್ತು ಎಫ್ಐಆರ್ ಕೂಡ ಹಾಕಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಾಕೀತು ಮಾಡಿದ್ದಾರೆ ಎಂದು ಬೈರೆನ್ ಸಿಂಗ್ ತಿಳಿಸಿದರು.