ನವದೆಹಲಿ: ಬ್ರಹ್ಮಪುತ್ರ ನದಿಗೆ ಹೊಂದಿಕೊಂಡಿರುವ ದ್ವೀಪಪ್ರದೇಶ ಅಸ್ಸಾಂನ ಮಜುಲಿಗೆ ರಸ್ತೆ –ತಡೆಗೋಡೆ ನಿರ್ಮಿಸಲು ₹ 1,075 ಕೋಟಿ ಹಾಗೂ ಗುವಾಹಟಿಯ ಕಾಮಾಕ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ₹ 300 ಕೋಟಿ ಒದಗಿಸಲು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ.
ಎನ್.ಕೆ.ಸಿಂಗ್ ನೇತೃತ್ವದ ಆಯೋಗವು ಈ ಕುರಿತ ವರದಿಯನ್ನು ಸಂಸತ್ತಿನಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಮಜುಲಿಯಲ್ಲಿ ಅಸ್ಸಾಂನ ವೈಷ್ಣವ ಸಮುದಾಯದ ಸ್ಮಾರಕ ತಾಣವೂ ಇದೆ.
ಇದು, ನದಿ ವ್ಯವಸ್ಥೆಯ ಭಾಗವಾಗಿದ್ದು, ಮಜುಲಿಯಲ್ಲಿ ದ್ವೀಪಪ್ರದೇಶವು 80 ಕಿ.ಮೀ. ಉದ್ದವಿದ್ದು, 10ರಿಂದ 15 ಕಿ.ಮೀ ಅಗಲದ ವಿಸ್ತೀರ್ಣ ಹೊಂದಿದೆ. ಒಟ್ಟು ಭೂ ಪ್ರದೇಶ 875 ಚದರ ಕಿ.ಮೀ ಆಗಿದ್ದು, ಸಮುದ್ರಮಟ್ಟದಿಂದ 85 ರಿಂದ 90 ಮೀಟರ್ ಎತ್ತರದಲ್ಲಿದೆ.
ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನವು ನಿಲಾಚಲ್ ಬೆಟ್ಟ ಪ್ರದೇಶದಲ್ಲಿದ್ದು, ಪ್ರಮುಖ ಧಾರ್ಮಿಕ ಯಾತ್ರಾತಾಣವಾಗಿದೆ. ಅಂಬುಬಾಚಿ ಮೇಳ ಈ ದೇವಸ್ಥಾನದಲ್ಲಿ ನಡೆಯಲಿರುವ ಪ್ರಮುಖ ಧಾರ್ಮಿಕ ಉತ್ಸವವಾಗಿದೆ.