ನವದೆಹಲಿ: ಪಂಜಾಬ್ನಲ್ಲಿ ಭತ್ತದ ಕೂಳೆ ಸುಡುವುದನ್ನು ತಗ್ಗಿಸುವಲ್ಲಿ ಎಎಪಿ ಸರ್ಕಾರ ವಿಫಲವಾಗಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯನ್ನು ‘ಗ್ಯಾಸ್ ಚೇಂಬರ್’ಆಗಿ ಎಎಪಿ ಪರಿವರ್ತಿಸಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
‘ಪಂಜಾಬ್ನಲ್ಲಿ ಕಳೆದ ವರ್ಷ ಭತ್ತದ ಕೂಳೆ ಸೇರಿದಂತೆ ಕೃಷಿ ತ್ಯಾಜ್ಯ ಸುಡುವ ಪ್ರಮಾಣ ಶೇ 19ರಷ್ಟು ಹೆಚ್ಚಾಗಿದೆ. ಹರಿಯಾಣದಲ್ಲಿ ಪ್ರಮಾಣದಲ್ಲಿ ಶೇ 30.6ರಷ್ಟು ಇಳಿಕೆ ಕಂಡುಬಂದಿದೆ’ ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
‘ದೆಹಲಿ ಹಾಗೂ ಉಪನಗರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ’ ಎಂದಿದ್ದಾರೆ.
‘ಕಳೆದ ವರ್ಷ ಸೆಪ್ಟೆಂಬರ್ 15ರಿಂದ ನವೆಂಬರ್ 2ರ ವರೆಗಿನ ಅವಧಿಯಲ್ಲಿ ಪಂಜಾಬ್ನಲ್ಲಿ ಕೂಳೆ ಸುಡುವ ಪ್ರಕರಣಗಳ ಸಂಖ್ಯೆ 1,266 ಇತ್ತು. ಈ ವರ್ಷ ಇದೇ ಅವಧಿಯಲ್ಲಿ 3,025 ಪ್ರಕರಣಗಳು ಕಂಡುಬಂದಿದ್ದು, ಶೇ 139ರಷ್ಟು ಹೆಚ್ಚಳ ಕಂಡುಬಂದಿದೆ’ ಎಂದೂ ಅವರು ಹೇಳಿದ್ದಾರೆ.