ಉನ್ನಾವ್: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ, ಕಳೆದ ವರ್ಷ ವಿಚಾರಣೆಗೆ ತೆರಳುವ ಮಾರ್ಗದಲ್ಲಿಯೇ ಪ್ರಕರಣದ ಆರೋಪಿಗಳು ಜೀವಂತವಾಗಿ ದಹನ ಮಾಡಿದ್ದ 23 ವರ್ಷದ ಸಂತ್ರಸ್ತೆಯ ಸಹೋದರನ ಆರು ವರ್ಷದ ಪುತ್ರ ಈಗ ನಾಪತ್ತೆಯಾಗಿದ್ದಾನೆ.
‘ಬಾಲಕ ತನ್ನ ಗ್ರಾಮದಿಂದ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರ 14 ತಂಡ ನಿಯೋಜಿಸಲಾಗಿದೆ’ ಎಂದು ಉನ್ನಾವ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಲಕರ್ಣಿ ತಿಳಿಸಿದ್ದಾರೆ.
ಲಖನೌ ವಲಯದ ಐ.ಜಿ ಲಕ್ಷ್ಮಿ ಸಿಂಗ್ ಅವರೂ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದರು. ಎಲ್ಲ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು. ಕುಟುಂಬ ಸದಸ್ಯರ ರಕ್ಷಣೆಗಾಗಿ ನಿಯೋಜಿಸಿದ್ದ ಮೂವರು ಪೊಲೀಸರನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಪಡಿಸಲಾಗಿದೆ.
ಈ ಮಧ್ಯೆ ಬಾಲಕನನ್ನು ಅಪಹರಿಸಲಾಗಿದೆ ಎಂದು ಕುಟುಂಬ ಸದಸ್ಯರು ದೂರು ನೀಡಿದ್ದು, ಸಂಬಂಧಿಕರೇ ಆಗಿರುವ ಐವರ ಹೆಸರನ್ನು ಉಲ್ಲೇಖಿಸಿದ್ದಾರೆ. ಶುಕ್ರವಾರ ಸಂಜೆ ಬಾಲಕನ ಹುಡುಕಾಟ ಯತ್ನ ವಿಫಲವಾದ ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.