ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ: 14ರಂದು ಸಿ.ಎಂಗಳ ಜೊತೆ ಶಾ ಚರ್ಚೆ

Last Updated 9 ಡಿಸೆಂಬರ್ 2022, 12:02 IST
ಅಕ್ಷರ ಗಾತ್ರ

ನವದೆಹಲಿ: ಗಡಿ ವಿವಾದ ಕುರಿತ ಉದ್ವಿ‌ಗ್ನ ಸ್ಥಿತಿ ಶಮನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದೇ 14ರಂದು ಕರ್ನಾಟಕ –ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಗಡಿ ವಿವಾದ ಕುರಿತಂತೆ ಅಹವಾಲು ಹೇಳಿಕೊಳ್ಳಲು ಬಂದಿದ್ದ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿಕೂಟದ ನಿಯೋಗ ಶಾ ಅವರನ್ನು ಭೇಟಿಯಾದ ಬಳಿಕ, ಎನ್‌ಸಿಪಿ ನಾಯಕ ಅಮೋಲ್ ಕೊಲ್ಹೆ ಈ ವಿಷಯ ತಿಳಿಸಿದರು.

‘ಶಾ ಅವರು ನಮ್ಮ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದರು. ಸೌಹಾರ್ದ ಪರಿಹಾರಕ್ಕಾಗಿ 14ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂಬುದಾಗಿ ತಿಳಿಸಿದರು’ ಎಂದು ಕೊಲ್ಹೆ ಹೇಳಿದರು.

ಗುರುವಾರ ಶಾ ಅವರಿಗೆ ಪತ್ರ ಬರೆದಿದ್ದ ಮೈತ್ರಿಕೂಟ ಮಹಾವಿಕಾಸ ಆಘಾಡಿಯ ಸಂಸದರು, ‘ಕರ್ನಾಟಕ–ಮಹಾರಾಷ್ಟ್ರ ಗಡಿ ಸಮಸ್ಯೆ ತೀವ್ರವಾಗಿದೆ. ಯಾವುದೇ ವೇಳೆ ಹಿಂಸೆ ಭುಗಿಲೇಳಬಹುದು. ತಕ್ಷಣ ಮಧ್ಯಪ್ರವೇಶಿಸಬೇಕು’ ಎಂದು ಕೋರಿದ್ದರು.

‘ಕರ್ನಾಟಕದ ಕೆಲ ನಿಲುವುಗಳಿಂದ ಗಡಿ ಜಿಲ್ಲೆಗಳಲ್ಲಿ ಇರುವ ಮರಾಠಿ ಭಾಷಿಕ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ವಿಷಯ ಪ್ರಸ್ತುತ ಸುಪ್ರೀಂ ಕೋರ್ಟ್‌ ಎದುರು ಇರುವಾಗಲೇ ಕರ್ನಾಟಕ ಇಂಥ ಕ್ರಮಕ್ಕೆ ಮುಂದಾಗಿದೆ’ ಎಂದು ಆರೋಪಿಸಿದ್ದರು.

ರಾಜ್ಯಗಳ ಪುನಾರಚನೆ ಬಳಿಕ ಬೆಳಗಾವಿ ಸೇರಿಕರ್ನಾಟಕದ 865 ಗ್ರಾಮಗಳು ನಮಗೆ ಸೇರಬೇಕು ಎಂದು ಮಹಾರಾಷ್ಟ್ರ ತಗಾದೆ ತೆಗೆದಿದೆ. ಆದರೆ, ‘ಗಡಿವಿವಾದ ಮುಗಿದ ಅಧ್ಯಾಯ’ ಎಂದು ಕರ್ನಾಟಕ ತಳ್ಳಿಹಾಕಿದೆ.

ರಾಜ್ಯಪಾಲರ ವಿರುದ್ಧ ದೂರು:ಇದೇ ಸಂದರ್ಭದಲ್ಲಿ ನಿಯೋಗವು ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧವೂ ಶಾ ಅವರಿಗೆ ದೂರು ನೀಡಿತು. ‘ರಾಜ್ಯಪಾಲರು, ಕೆಲ ಬಿಜೆಪಿ ನಾಯಕರು ಆಗಾಗ್ಗೆ ಶಿವಾಜಿ ಅವರನ್ನು ಅವಮಾನಿಸುತ್ತಿದ್ದಾರೆ’ ಎಂದು ಆರೋಪಿಸಿತು.

ಶಿವಾಜಿ ಮಹಾರಾಜ್‌ ಅವರನ್ನು ನಿಂದಿಸಿ ಹೇಳಿಕೆ ನೀಡುತ್ತಿರುವ ಮುಖಂಡರ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಬೇಕು ಎಂದು ಒತ್ತಾಯಿಸಲಾಯಿತು ಎಂದು ಕೊಲ್ಹೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT