ಗುರುಗ್ರಾಮ: 2015ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಒತ್ತುವರಿ ತೆರವು ಕಾರ್ಯಾಚರಣೆ ತಂಡದ ಮೇಲೆ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿದ್ದ 17 ಅಪರಾಧಿಗಳಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವು 7ರಿಂದ 10 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿದೆ. ಇದರಲ್ಲಿ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ಸಹ ಸೇರಿದ್ದಾರೆ.
ಮೇ 15, 2015ರಂದು ಗುರುಗ್ರಾಮದ ಸೆಕ್ಟರ್–47ರ ಝಿಮರ್ ಬಸ್ತಿಯಲ್ಲಿ ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರ ತಂಡದ(ಎಚ್ಯುಡಿಎ)ಮೇಲೆ ದಾಳಿ ನಡೆಸಿದ್ದಲ್ಲದೆ, ಪೆಟ್ರೋಲ್ ಬಾಂಬ್ ಮತ್ತು ಎಲ್ಪಿಜಿ ಸಿಲಿಂಡರ್ಗಳನ್ನು ಸಹ ಎಸೆಯಲಾಗಿತ್ತು. ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಮ್ಯಾಜಿಸ್ಟ್ರೇಟ್ ಮತ್ತು 15 ಪೊಲೀಸರು ಗಾಯಗೊಂಡಿದ್ದರು.
ಇದರಲ್ಲಿ 10 ಮಂದಿಗೆ 7 ವರ್ಷಗಳ ಕಠಿಣ ಸೆರೆಮನೆ ವಾಸ ಮತ್ತು 7 ಮಂದಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆಗೊಳಗಾದ 10 ಮಹಿಳೆಯರು ಸೇರಿದಂತೆ 17 ಆಪರಾಧಿಗಳಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮೋನ ಸಿಂಗ್ ದಂಡವನ್ನೂ ವಿಧಿಸಿದ್ದಾರೆ.
10 ಮಂದಿ ಮಹಿಳಾ ಅಪರಾಧಿಗಳಿಗೆ ₹10,000, ಉಳಿದ ಆರೋಪಿಗಳಿಗೆ ₹ 20,000 ದಂಡ ವಿಧಿಸಲಾಗಿದೆ. ಒಂದೊಮ್ಮೆ, ದಂಡ ಪಾವತಿಸಲು ವಿಫಲವಾದರೆ, ಎರಡು ಮೂರು ವರ್ಷ ಜೈಲುವಾಸ ಹೆಚ್ಚಾಗಲಿದೆ.
'ಸರ್ಕಾರಿ ಅಧಿಕಾರಿಗಳನ್ನು ಗಾಯಗೊಳಿಸಿರುವುದು ಆರೋಪಿಗಳ ಕಡೆಯಿಂದ ಆದ ಗಂಭೀರವಾದ ಅಪರಾಧವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ, ಅವರು ಸುಧಾರಿಸಿಕೊಳ್ಳುವುದಿಲ್ಲ ಮತ್ತು ಸಮಾಜಕ್ಕೆ ನಿರಂತರ ಬೆದರಿಕೆ ಆಗಿದ್ದಾರೆ ಎಂದು ಹೇಳಲು ಯಾವುದೇ ಕಾರಣವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.