ನವದೆಹಲಿ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿ ಎಂಬಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ 'ಸತ್ಯ-ಶೋಧನೆ'ಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಐವರು ಮಹಿಳಾ ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
ಪಕ್ಷದ ಉಪಾಧ್ಯಕ್ಷೆ ಮತ್ತು ಸಂಸದೆ ರೇಖಾ ವರ್ಮಾ, ಉತ್ತರ ಪ್ರದೇಶದ ಸಚಿವೆ ಬೇಬಿ ರಾಣಿ ಮೌರ್ಯಾ, ತಮಿಳುನಾಡು ಶಾಸಕಿ ವನತಿ ಶ್ರೀನಿವಾಸನ್, ಪಶ್ಚಿಮ ಬಂಗಾಳದ ಶಾಸಕಿ ಶ್ರೀರೂಪಾ ಮಿತ್ರ ಚೌಧರಿ ಮತ್ತು ಕುಶ್ಬು ಸುಂದರ್ ಸತ್ಯ ಶೋಧನಾ ಸಮಿತಿಯಲ್ಲಿದ್ದಾರೆ.
ಏಪ್ರಿಲ್ 5ರಂದು, ಪ್ರಮುಖ ಆರೋಪಿಯ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳಲು 9ನೇ ತರಗತಿ ವಿದ್ಯಾರ್ಥಿನಿಯು ಆತನ ಮನೆಗೆ ಭೇಟಿ ನೀಡಿದ್ದಾಗ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅಸ್ವಸ್ಥಳಾಗಿ ಮನೆಗೆ ಮರಳಿದ ಬಳಿಕ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ವಿದ್ಯಾರ್ಥಿನಿ ಸಾವಿಗೆ ಕಾರಣ, ಆಕೆಯ ಪೋಷಕರ ಆರೋಪದ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅನುಮಾನ ವ್ಯಕ್ತಪಡಿಸಿದ್ದರು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಅಪ್ರಾಪ್ತ ಬಾಲಕಿ ಮತ್ತು ಪ್ರಮುಖ ಆರೋಪಿ ಇಬ್ಬರೂ ಪ್ರೀತಿಸುತ್ತಿದ್ದರು ಎಂಬ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ತನಿಖೆ ಪೂರ್ಣಗೊಳ್ಳುವ ಮುನ್ನವೇ ನಾವು ತೀರ್ಮಾನಗಳನ್ನು ಯಾಕೆ ಮಾಡಬೇಕು? ಎಂದು ಮಮತಾ ಪ್ರಶ್ನಿಸಿದ್ದರು.