ಜೈಪುರ: ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಅವರು(59) ಕೋವಿಡ್ನಿಂದಾಗಿ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು.
ಕಿರಣ್ ಮಹೇಶ್ವರಿ ಅವರು ಮೆಡಂತ ಆಸ್ಪತ್ರೆಯಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಮಹೇಶ್ವರಿ ಅವರು ರಾಜ್ಸಾಮಂದ್ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ವಿಧಾನಸಭೆ ಸ್ಪೀಕರ್ ಸಿ.ಪಿ ಜೋಶಿ, ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಮತ್ತು ಇತರ ನಾಯಕರು ಮಹೇಶ್ವರಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಕಿರಣ್ ಮಹೇಶ್ವರಿ ಅವರ ಅಕಾಲಿಕ ನಿಧನದಿಂದ ಬಹಳ ಬೇಸರವಾಗಿದೆ. ಅವರ ಕುಟುಂಬ, ಸ್ನೇಹಿತರಿಗೆ ಸಂತಾಪ ಸೂಚಿಸುತ್ತಿದ್ದೇನೆ ಎಂದು ಅಶೋಕ್ ಗೆಹ್ಲೋಟ್ ಅವರು ಟ್ವೀಟ್ ಮಾಡಿದ್ದಾರೆ. ಸ್ಪೀಕರ್ ಜೋಶಿ ಕೂಡ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.