ನವದೆಹಲಿ (ಪಿಟಿಐ): ಆಮ್ಲಜನಕದ ಕಾನ್ಸನ್ಟ್ರೇಟರ್ಗಳನ್ನು ಬ್ಲ್ಯಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟುಕೊಂಡ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಉದ್ಯಮಿ ನವನೀತ್ ಕಾಲ್ರಾ ಅವರನ್ನು ಐದು ದಿನಗಳವರೆಗೆ ತಮ್ಮ ಕಸ್ಟಡಿಗೆ ನೀಡಬೇಕು ಎಂದು ದೆಹಲಿ ಪೊಲೀಸರು ನ್ಯಾಯಾಲಯವನ್ನು ಕೋರಿದ್ದಾರೆ.
ಭಾನುವಾರ ರಾತ್ರಿ ಕಾಲ್ರಾ ಅವರನ್ನು ಬಂಧಿಸಿದ ಪೊಲೀಸರು, ಸೋಮವಾರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರ್ಚನಾ ಬೆನಿವಾಲ್ ಅವರ ಎದುರು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದ್ದಾರೆ.
ದೆಹಲಿ ಪೊಲೀಸರು ದಾಳಿ ನಡೆಸಿ ಕಾಲ್ರಾ ಒಡೆತನದ ಮೂರು ರೆಸ್ಟೋರೆಂಟ್ಗಳಿಂದ 524 ಆಮ್ಲಜನಕ ಕಾನ್ಸನ್ಟ್ರೇಟರ್ಗಳನ್ನು ವಶಪಡಿಸಿಕೊಂಡ ನಂತರ ಅವರು ಒಂದು ವಾರದಿಂದ ಪರಾರಿಯಾಗಿದ್ದರು. ಮೇ 5 ರಂದು ಕಾಲ್ರಾ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಕಾಲ್ರಾ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ಮೇ 13 ರಂದು ತಿರಸ್ಕರಿಸಿತ್ತು.