ಡೆಹ್ರಾಡೂನ್: ಉತ್ತರಾಖಂಡ ಪೊಲೀಸ್, ಇಲ್ಲಿನ ದಲನವಾಲಾ ಪ್ರದೇಶದಲ್ಲಿ ಆರಂಭಿಸಿರುವ ‘ಬಾಲ ಮಿತ್ರ’ ಪೊಲೀಸ್ ಠಾಣೆಯನ್ನು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಶುಕ್ರವಾರ ಉದ್ಘಾಟಿಸಿದರು.
ಇದು ರಾಜ್ಯದಲ್ಲಿ ಸ್ಥಾಪಿತವಾಗಿರುವ ಮೊದಲ ‘ಮಕ್ಕಳ ಸ್ನೇಹಿ’ ಪೊಲೀಸ್ ಠಾಣೆಯಾಗಿದೆ.
‘ಮಕ್ಕಳ ರಕ್ಷಣೆಯ ದೃಷ್ಟಿಯಿಂದ ರಾಜ್ಯದ ಪೊಲೀಸ್ ಇಲಾಖೆಯು ‘ಬಾಲ ಮಿತ್ರ’ ಪೊಲೀಸ್ ಠಾಣೆಯನ್ನು ಆರಂಭಿಸಿದೆ. ಇದು ಪ್ರಮುಖ ಸುಧಾರಣಾ ಹಂತ’ ಎಂದು ರಾವತ್ ಅವರು ತಿಳಿಸಿದ್ದಾರೆ.
‘ತಮಗೆ ಅರಿವಿಲ್ಲದಂತೆ ತಪ್ಪುಗಳನ್ನು ಮಾಡುವ, ಕೆಟ್ಟ ದಾರಿ ಹಿಡಿಯುವ ಅಮಾಯಕ ಮಕ್ಕಳನ್ನು ತಿದ್ದಿ ಅವರು ಸಮಾಜದಲ್ಲಿ ಗೌರವದಿಂದ ಬದುಕಲು ನೆರವಾಗಬೇಕು ಎಂಬ ಉದ್ದೇಶದಿಂದ ‘ಬಾಲ ಮಿತ್ರ’ ಪೊಲೀಸ್ ಠಾಣೆ ಆರಂಭಿಸಲಾಗಿದೆ’ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.