ನವದೆಹಲಿ: ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಶುಕ್ರವಾರ ಭೇಟಿ ಆದರು.ಆಡಳಿತಾರೂಢ ಕಾಂಗ್ರೆಸ್ನ ಒಳ ಜಗಳದ ಹಿನ್ನೆಲೆಯಲ್ಲಿ ಈ ಭೇಟಿಯು ಮಹತ್ವ ಪಡೆದಿದೆ. ರಾಹುಲ್ ಅವರನ್ನು ಬಘೆಲ್ ಅವರುಮಂಗಳವಾರವೂ ಭೇಟಿಯಾಗಿದ್ದರು.
ಸಂಜೆ ಸುಮಾರು 4 ಗಂಟೆಗೆ ಬಘೆಲ್ ಅವರು ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದರು. ಈ ವೇಳೆ ಛತ್ತೀಸಗಡದ ಕಾಂಗ್ರೆಸ್ ಉಸ್ತುವಾರಿ ಪಿ.ಎಲ್. ಪೂನಿಯಾ ಕೂಡ ಉಪಸ್ಥಿತರಿದ್ದರು.
ಛತ್ತೀಸಗಡದಲ್ಲಿ 2018ರಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗ ಅಧಿಕಾರ ಹಂಚಿಕೆಯ ಒಪ್ಪಂದ ಆಗಿತ್ತು. ಹಾಗಾಗಿ, ಈಗ ಮುಖ್ಯಮಂತ್ರಿ ಸ್ಥಾನ ತಮಗೆ ಸಿಗಬೇಕು ಎಂದು ಆರೋಗ್ಯ ಸಚಿವ ಟಿ.ಎಸ್. ಸಿಂಗ್ದೇವ್ ಒತ್ತಾಯಿಸಿದ್ದಾರೆ. ಇದು ಛತ್ತೀಸಗಡ ಕಾಂಗ್ರೆಸ್ನೊಳಗೆ ಬಣ ರಾಜಕಾರಣಕ್ಕೆ ಕಾರಣವಾಗಿದೆ.
ದೇವ್ ಕೂಡ ರಾಹುಲ್ ಅವರನ್ನು ಗುರುವಾರ ಭೇಟಿಯಾಗಿದ್ದರು. ಬಘೆಲ್ ಮತ್ತು ದೇವ್ ಅವರಿಬ್ಬರೂ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರನ್ನು ಬುಧವಾರ ಭೇಟಿಯಾಗಿದ್ದರು.