ನವದೆಹಲಿ: ಭಾರತೀಯ ಕರಾವಳಿ ಭದ್ರತಾ ಪಡೆ ಸಂಸ್ಥಾಪನ ದಿನದ ಅಂಗವಾಗಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಕರಾವಳಿ ಕಾವಲು ಪಡೆಯ ಯೋಧರಿಗೆ ಶುಭಾಶಯ ಕೋರಿದ್ದಾರೆ.
‘ನಿಮ್ಮ ಸೇವೆಯಿಂದಾಗಿ ದೇಶದ ಕಡಲ ಗಡಿಗಳು ಸುರಕ್ಷಿತವಾಗಿವೆ‘ ಎಂದು ಪ್ರಧಾನಿಯವರು ಕರಾವಳಿ ರಕ್ಷಣಾ ಪಡೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
‘ಭಾರತೀಯ ಕರಾವಳಿ ಭದ್ರತಾ ಪಡೆಯ ಪ್ರತಿಷ್ಠಾನ ದಿನದಂದು, ಭದ್ರತಾ ಪಡೆಯ ಎಲ್ಲಾ ಸಿಬ್ಬಂದಿ ಮತ್ತು ಕುಟುಂಬಗಳಿಗೆ ನನ್ನ ಶುಭಾಶಯಗಳು. ನಿಮ್ಮೆಲ್ಲರ ಪ್ರಾಮಾಣಿಕ ಸೇವೆಯ ಬಗ್ಗೆ ನಮಗೆ ಹೆಮ್ಮೆ ಇದೆ‘ ಎಂದು ಹೇಳಿದ್ದಾರೆ.
ಕಡಲತೀರದ ಕಾನೂನು ಜಾರಿ ಸಂಸ್ಥೆ ತನ್ನ 45ನೇ ಸಂಸ್ಥಾಪನಾ ದಿನವನ್ನು (ರೈಸಿಂಗ್ ಡೇ) ಆಚರಿಸುತ್ತಿದೆ.
1978ರಲ್ಲಿ ಏಳು ವಿವಿಧ ಸ್ಥಳಗಳಲ್ಲಿ ಸಾಧಾರಣವಾಗಿ ಆರಂಭವಾದ ಕರಾವಳಿ ಭದ್ರತಾ ಪಡೆ ಈಗ 152 ಹಡಗುಗಳು ಮತ್ತು 62 ಯುದ್ಧ ವಿಮಾನಗಳೊಂದಿಗೆ ಅಸಾಧಾರಣ ಶಕ್ತಿಯಾಗಿ ಬೆಳೆದಿದೆ. 2025ರ ವೇಳೆಗೆ 200 ವೇದಿಕೆಗಳು ಮತ್ತು 80 ಯುದ್ಧ ವಿಮಾನಗಳೊಂದಿಗೆ ಮತ್ತಷ್ಟು ಸಶಕ್ತವಾಗುವ ಗುರಿಯನ್ನು ಹೊಂದಿದೆ.