ನವದೆಹಲಿ (ಪಿಟಿಐ): ಭಾರತದತ್ತ ಹೊರಟಿದ್ದ ಎರಡು ಎಮಿರೇಟ್ಟ್ ವಿಮಾನಗಳ ನಡುವೆ ದುಬೈ ವಿಮಾನನಿಲ್ದಾಣದ ರನ್ವೇನಲ್ಲಿ ಅಪಘಾತ ಸಂಭವಿಸುವುದು ಸ್ವಲ್ಪದರಲ್ಲಿ ತಪ್ಪಿದ ಘಟನೆ ಕುರಿತು ವರದಿ ಸಲ್ಲಿಸಲು ಯುಎಇಗೆ ಭಾರತ ಕೇಳಿದೆ.
ಭಾರತ ವಿಮಾನಯಾನ ನಿಯಂತ್ರಣ ಸಂಸ್ಥೆಯಾದ ಡಿಜಿಸಿಎಯು, ಉಲ್ಲೇಖಿತ ಘಟನೆಗೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ನೀಡಬೇಕು ಎಂದು ಯುಎಇಯ ವಿಮಾನಯಾನ ಪ್ರಾಧಿಕಾರಕ್ಕೆ ಕೋರಿದೆ.
ಜ. 9ರಂದು ದುಬೈ ವಿಮಾನನಿಲ್ದಾಣದಲ್ಲಿ ದುಬೈ– ಹೈದರಾಬಾದ್ ಮತ್ತು ದುಬೈ–ಬೆಂಗಳೂರು ನಡುವಣ ಪ್ರಯಾಣಿಕರ ವಿಮಾನಗಳ ನಡುವೆ ಅಪಘಾತ ಸಂಭವಿಸುವುದು ಸ್ವಲ್ಪದರಲ್ಲಿಯೇ ತಪ್ಪಿತ್ತು.
ಹೈದರಾಬಾದ್ ವಿಮಾನ ಗಗನಕ್ಕೆ ಚಿಮ್ಮುವ ವೇಳೆಗೆ ಅದೇ ರನ್ವೇನಲ್ಲಿಯೇ ಬೆಂಗಳೂರು ವಿಮಾನವು ಬಂದಿತ್ತು. ಇದು ಗೊತ್ತಾದ ಕೂಡಲೇ ವಿಮಾನನಿಲ್ದಾಣದ ನಿಯಂತ್ರಕರು ದುಬೈ–ಹೈದರಾಬಾದ್ ವಿಮಾನಕ್ಕೆ ಗಗನಕ್ಕೆ ಚಿಮ್ಮಲು (ಟೇಕ್ ಆಫ್) ಅವಕಾಶ ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಡಿಜಿಸಿಎ ಮುಖ್ಯಸ್ಥ ಅರುಣ್ಕುಮಾರ್ ಅವರು, ಐಸಿಎಒ (ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ) ಅನುಸಾರ ಎರಡೂ ವಿಮಾನಗಳು ನಿಖರ ಸಮಯವನ್ನು ಪಾಲನೆ ಮಾಡಿದ್ದವು. ಈ ಬಗ್ಗೆ ಅದು ತನಿಖೆ ನಡೆಸಲಿದೆ ಎಂದರು.
ಯುಇಇ ವಕ್ತಾರರು ಈ ಕುರಿತ ಹೇಳಿಕೆಯಲ್ಲಿ, ಒಂದೇ ರನ್ವೇನಲ್ಲಿ ವಿಮಾನ ಬರುತ್ತಿರುವುದು ಗೊತ್ತಾದಂತೆ ವಿಮಾನಯಾನ ನಿಯಂತ್ರಕರು ಟೇಕ್ ಆಫ್ಗೆ ಅನುಮತಿ ನಿರಾಕರಿಸಿದರು. ಯಾವುದೇ ವಿಮಾನ ಸ್ವಲ್ಪವು ಜಖಂಗೊಂಡಿಲ್ಲ, ಯಾರಿಗೂ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುರಕ್ಷತೆಗೆ ಎಂದಿಗೂ ಮೊದಲ ಆದ್ಯತೆ ನೀಡಲಿದ್ದು, ಈ ಬಗ್ಗೆ ಆಂತರಿಕವಾಗಿ ಪರಿಶೀಲನೆ ನಡೆದಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.