ಅಹಮದಾಬಾದ್: ‘ಮೊರ್ಬಿ ಸೇತುವೆಯ ದುರಸ್ತಿ ಕಾರ್ಯ ಕೈಗೊಂಡಿದ್ದ ಅಜಂತಾ ಕಂಪನಿಯು ನಮಗೆ ಯಾವ ಮಾಹಿತಿಯನ್ನೂ ನೀಡದೆ ಅದನ್ನು ಜನರ ಬಳಕೆಗೆ ಮುಕ್ತಗೊಳಿಸಿತ್ತು’ ಎಂದು ಮೊರ್ಬಿ ಪುರಸಭೆಯು ಗುಜರಾತ್ ಹೈಕೋರ್ಟ್ಗೆ ತಿಳಿಸಿದೆ.
ಈ ಸಂಬಂಧ ಪುರಸಭೆಯುಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಆಶುತೋಷ್ ಶಾಸ್ತ್ರಿ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಅಫಿಡವಿಟ್ ಸಲ್ಲಿಸಿದೆ.
‘ತೂಗುಸೇತುವೆಯ ನವೀಕರಣವನ್ನು ಪರಿಪೂರ್ಣವಾಗಿ ಕೈಗೊಂಡ ನಂತರವೇ ನಾಗರಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಕಂಪನಿ ಜೊತೆ ಈ ವರ್ಷ ಮಾಡಿಕೊಂಡಿದ್ದ ಒಪ್ಪಂದದಲ್ಲಿ ತಿಳಿಸಲಾಗಿತ್ತು. ಆದರೆ ಕಂಪನಿ ನಮ್ಮ ಅನುಮತಿ ಪಡೆಯದೆ ಸೇತುವೆಯನ್ನು ಬಳಕೆಗೆ ಮುಕ್ತಗೊಳಿಸಿದೆ’ ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ.
ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವಬ್ರಿಟಿಷರ ಕಾಲದ ಈ ಸೇತುವೆ ನವೀಕರಣದ ನಂತರ ಬಳಕೆಗೆ ಮುಕ್ತವಾದ ಐದು ದಿನಗಳಲ್ಲಿಯೇ (ಅಕ್ಟೋಬರ್ 30) ಕುಸಿದಿತ್ತು. ಈ ದುರಂತದಲ್ಲಿ 135 ಜನ ಅಸುನೀಗಿದ್ದರು.