ನವದೆಹಲಿ: ‘ಭಾರತ–ಚೀನಾ ನಡುವಣ ಬಿಕ್ಕಟ್ಟು ನಿಧಾನವಾಗಿ ಶಮನಗೊಳ್ಳುತ್ತಿದ್ದು, ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿಯ ಒಟ್ಟಾರೆ ಪರಿಸ್ಥಿತಿ ಸ್ಥಿರವಾಗಿದೆ’ ಎಂದು ಭಾರತದಲ್ಲಿರುವ ಚೀನಾದ ರಾಯಭಾರಿ ಸನ್ ವೀಡೊಂಗ್ ಹೇಳಿದ್ದಾರೆ.
ಭಾರತ–ಚೀನಾ ಗಡಿಯಲ್ಲಿನ ಗೋಗ್ರಾ–ಹಾಟ್ಸ್ಪ್ರಿಂಗ್ ಪ್ರದೇಶದ 15ನೇ ಗಸ್ತು ತಾಣದಿಂದ ಉಭಯ ದೇಶಗಳ ಸೇನಾ ತುಕಡಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಇತ್ತೀಚೆಗೆ ಪೂರ್ಣಗೊಂಡಿತ್ತು.
ಇದರ ಬೆನ್ನಲ್ಲೇ ಮಂಗಳವಾರ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯ ಬಳಿ ಸೈನಿಕರ ನಡುವೆ ನಡೆದ ಕಾಳಗದ ಬಳಿಕ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಅದು ಈಗ ತಿಳಿಯಾಗಿದೆ’ ಎಂದಿದ್ದಾರೆ.
‘ಭಾರತದೊಂದಿಗೆ ರಾಜತಾಂತ್ರಿಕ ಹಾಗೂ ಸೇನಾ ಹಂತದಲ್ಲಿ ಮಾತುಕತೆ ನಡೆಸುವ ಮೂಲಕ ಬಿಕ್ಕಟ್ಟು ಪರಿಹರಿಸಲು ಚೀನಾ ಮುಂದಾಗಲಿದೆ. ಉಭಯ ರಾಷ್ಟ್ರಗಳು ಒಟ್ಟಾಗಿ ಉಳಿದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸಬೇಕಿದೆ’ ಎಂದು ತಿಳಿಸಿದ್ದಾರೆ.