ಮುಂಬೈ: ಸಿಬಿಐ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಆಪ್ತ ಸಹಾಯಕ ಕುಂದನ್ ಶಿಂಧೆಗೆ ವಿಶೇಷ ನ್ಯಾಯಾಲಯವು ಶುಕ್ರವಾರ ಜಾಮೀನು ನೀಡಿದೆ.
‘ಸಿಬಿಐನ ವಿಶೇಷ ನ್ಯಾಯಾಧೀಶ ಎಸ್.ಎಚ್. ಗ್ವಾಲಾನಿ ಅವರು ಕುಂದನ್ ಶಿಂಧೆಗೆ ಜಾಮೀನು ನೀಡಿದ್ದಾರೆ’ ಎಂದು ಶಿಂಧೆ ಪರ ವಕೀಲ ಅನಿಕೇತ್ ನಿಕಮ್ ಹೇಳಿದ್ದಾರೆ.
ಇದಕ್ಕೂ ಮುನ್ನ, ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಕುಂದನ್ ಅವರಿಗೆ ಜಾಮೀನು ನೀಡಿತ್ತು.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದನ್ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) 2021ರ ಜೂನ್ ತಿಂಗಳಿನಲ್ಲಿ ಬಂಧಿಸಿತ್ತು. ಬಳಿಕ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಕುಂದನ್ ಅವರನ್ನು ಸಿಬಿಐ ತನ್ನ ವಶಕ್ಕೆ ಪಡೆದಿತ್ತು.