ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ವ್ಯಾಪಕಗೊಂಡ ಬೆನ್ನಲ್ಲೇ ವಿದೇಶಗಳಿಂದ ವೈದ್ಯಕೀಯ ಆಮ್ಲಜನಕ (ಆಕ್ಸಿಜನ್) ತರುವ ಸಲುವಾಗಿ ಭಾರತೀಯ ನೌಕಾಪಡೆಯು ಯುದ್ಧನೌಕೆಗಳನ್ನು ನಿಯೋಜನೆ ಮಾಡಿದೆ.
ಮೊದಲ ಹಂತದಲ್ಲಿ ಬಹ್ರೈನ್, ಸಿಂಗಾಪುರ ಮತ್ತು ಥಾಯ್ಲೆಂಡ್ಗಳಿಂದ ಆಮ್ಲಜನಕ ತರಲು ನೌಕೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈಗೆ 40 ಮೆಟ್ರಿಕ್ ಟನ್ ದ್ರವೀಕೃತ ಆಮ್ಲಜನಕ ತರುವ ಸಲುವಾಗಿ ಐಎನ್ಎಸ್ ಕೋಲ್ಕತ್ತ ಮತ್ತು ಐಎನ್ಎಸ್ ತಲ್ವಾರ್ಗಳು ಈಗಾಗಲೇ ಬಹ್ರೈನ್ನ ಮನಾಮ ಬಂದರು ತಲುಪಿವೆ ಎಂದು ಅವರು ಹೇಳಿದ್ದಾರೆ.
‘ದೇಶದ ಆಮ್ಲಜನಕ ಬೇಡಿಕೆ ಪೂರೈಸುವ ಸಲುವಾಗಿ ಭಾರತೀಯ ನೌಕಾಪಡೆಯು ‘ಆಪರೇಷನ್ ಸಮುದ್ರ ಸೇತು–2 ಹಮ್ಮಿಕೊಂಡಿದೆ’ ಎಂದು ನೌಕಾಪಡೆಯ ವಕ್ತಾರ, ಕಮಾಂಡರ್ ವಿವೇಕ್ ಮಧ್ವಾಲ್ ಹೇಳಿದ್ದಾರೆ.
ಕಳೆದ ವರ್ಷ ಕೋವಿಡ್ ಮೊದಲ ಅಲೆಯ ಸಂದರ್ಭ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಸಲುವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ ‘ವಂದೇ ಭಾರತ್ ಮಿಷನ್’ಗೆ ನೌಕಾಪಡೆ ಸಾಥ್ ನೀಡಿತ್ತು. ಅದಕ್ಕಾಗಿ ‘ಸಮುದ್ರ ಸೇತು’ ಕಾರ್ಯಾಚರಣೆ ನಡೆಸಿತ್ತು.