ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ನಲ್ಲಿ ರಾಜನಾಥ್‌ ಸಿಂಗ್‌; ನಾಳೆ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿ

Last Updated 2 ಫೆಬ್ರುವರಿ 2021, 9:02 IST
ಅಕ್ಷರ ಗಾತ್ರ

ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್‌) ಲಘು ಯುದ್ಧ ವಿಮಾನ (ಎಲ್‌ಸಿಎ) ಎರಡನೇ ಉತ್ಪಾದನಾ ಘಟಕ ಮಂಗಳವಾರ ಉದ್ಘಾಟಿಸಿದರು.

ರಾಜನಾಥ್‌ ಸಿಂಗ್‌ ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ 5ರವರೆಗೆ ನಡೆಯಲಿರುವ 'ಏರೊ ಇಂಡಿಯಾ' ವೈಮಾನಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

'ಕೋವಿಡ್‌–19 ಸಾಂಕ್ರಾಮಿಕದ ನಡುವೆಯೂ ಎಚ್‌ಎಎಲ್‌ಗೆ ಶಸ್ತ್ರಾಸ್ತ್ರ ಪಡೆಗಳಿಂದ ₹48,000 ಮೊತ್ತದ ತಯಾರಿಕೆಗೆ ಬೇಡಿಕೆ ದೊರೆತಿದೆ. ನಮ್ಮ ದೇಶದ ರಕ್ಷಣಾ ವ್ಯವಸ್ಥೆಗಾಗಿ ಸದಾ ಇತರೆ ರಾಷ್ಟ್ರಗಳ ಮೇಲೆ ಅವಲಂಬಿಸಿರುವುದು ಸಾಧ್ಯವಿಲ್ಲ' ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

'ರಕ್ಷಣಾ ವಲಯದ ತಯಾರಿಕೆಯಲ್ಲಿ ಮುಂದಿನ 3–4 ವರ್ಷಗಳಲ್ಲಿ ನಾವು ₹1.75 ಲಕ್ಷ ಕೋಟಿ ಗುರಿಯನ್ನು ತಲುಪುವ ಭರವಸೆ ಇದೆ. ತೇಜಸ್‌ ಎಂ1ಎ ಖರೀದಿಗೆ ಹಲವು ರಾಷ್ಟ್ರಗಳು ಆಸಕ್ತಿ ತೋರಿವೆ, ನಿಮಗೆ ಭರವಸೆ ನೀಡುತ್ತಿದ್ದೇನೆ ಅತ್ಯಂತ ಶೀಘ್ರದಲ್ಲಿಯೇ ಬೇರೆ ರಾಷ್ಟ್ರಗಳಿಂದಲೂ ನಿಮಗೆ ಬೇಡಿಕೆ ಬರಲಿದೆ' ಎಂದರು.

'ತೇಜಸ್‌' ದೇಶೀಯವಾಗಿ ಅಭಿವೃದ್ಧಿ ಆಗಿರುವುದು ಮಾತ್ರವೇ ಅಲ್ಲ, ಅದಕ್ಕೆ ಸಮನಾದ ವಿದೇಶದ ಹಲವು ಯುದ್ಧ ವಿಮಾನಗಳಿಗಿಂತಲೂ ಉತ್ತಮ ಸಾಮರ್ಥ್ಯ ಹೊಂದಿದೆ. ಎಂಜಿನ್‌ ಸಾಮರ್ಥ್ಯ, ರಡಾರ್‌ ವ್ಯವಸ್ಥೆ, ಆಗಸದಲ್ಲಿಯೇ ಇಂಧನ ಭರ್ತಿ ವ್ಯವಸ್ಥೆ ಮತ್ತು ನಿರ್ವಹಣೆ ಹಾಗೂ ಬೇರೆ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಸಿಗುತ್ತದೆ ಎಂದು ರಾಜನಾಥ್‌ ಸಿಂಗ್‌ ತೇಜಸ್‌ ಕುರಿತು ವಿವರಿಸಿದರು.

ಈ ಬಾರಿಯ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ‘ಆತ್ಮನಿರ್ಭರ ಭಾರತದ ವಿಮಾನಗಳು’ ಆಕರ್ಷಣೆಯ ಕೇಂದ್ರ ಬಿಂದುಗಳಾಗಲಿವೆ. ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ವಿಮಾನಗಳ ಪ್ರದರ್ಶನಕ್ಕೆ ಎಚ್‌ಎಎಲ್‌ ಯೋಜಿಸಿದೆ.

'ಪರಿಕಲ್ಪನೆ, ಸ್ಥಳೀಯವಾಗಿ ಅಭಿವೃದ್ಧಿ, ಸಹಯೋಗ' ಘೋಷವಾಕ್ಯದಡಿ ಈ ವಿಮಾನಗಳು ಪ್ರದರ್ಶನ ನೀಡಲಿವೆ.

ಏರ್‌ ಶೋ ಭದ್ರತಾ ಕ್ರಮಗಳ ಬಗ್ಗೆ ಶನಿವಾರ ಆದೇಶ ಹೊರಡಿಸಿರುವ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ನಗರದಲ್ಲಿ ಡ್ರೋನ್ ಹಾಗೂ ಮೈಕ್ರೋಲೈಟ್ಸ್ ಸೇರಿದಂತೆ ಇತರೆ ವಸ್ತುಗಳ ಹಾರಾಟವನ್ನು ನಿಷೇಧಿಸಿದ್ದಾರೆ.

‘ಏರ್‌ ಶೋಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಬರಲಿದ್ದಾರೆ. ನಿರ್ದಿಷ್ಟ ವಿಮಾನಗಳ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಅಂಥ ವಿಮಾನಗಳ ಹಾರಾಟಕ್ಕೆ ಅಡಚಣೆಯಾಗುವ ಡ್ರೋನ್, ಮೈಕ್ರೋಲೈಟ್ಸ್, ಸಣ್ಣ ಏರ್ ಕ್ರಾಫ್ಟ್ ಹಾಗೂ ಬಲೂನ್ ಸೇರಿದಂತೆ ಯಾವುದೇ ವಸ್ತುವನ್ನು ಆಕಾಶದಲ್ಲಿ ಹಾರಿಸಬಾರದು’ ಎಂದೂ ಆದೇಶದಲ್ಲಿ ತಿಳಿಸಿದ್ದಾರೆ.

ಎಚ್‌ಎಎಲ್‌ ನಿರ್ಮಿಸಿರುವ ಸುಖೊಯ್‌ ಎಸ್‌ಯು–3ಒ ಎಂಕೆಐ, ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಧ್ರುವ, ಲಘುಯುದ್ಧ ಹೆಲಿಕಾಪ್ಟರ್‌ಗಳು ದೇಶೀಯ ವಿಮಾನಗಳ ಪಟ್ಟಿಯಲ್ಲಿವೆ.ನಿರ್ದಿಷ್ಟ ಉದ್ದೇಶ ಈಡೇರಿಕೆಗೆ ಯುದ್ಧವಿಮಾನಗಳು ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು (ಸಿಎಟಿಎಸ್‌) ಎಚ್‌ಎಎಲ್‌ ರೂಪಿಸಿದ್ದು, ಅದರ ಕುರಿತೂ ಪ್ರದರ್ಶನ ಇರಲಿದೆ. ತೇಜಸ್‌ ಯುದ್ಧವಿಮಾನವೂ ಈ ವ್ಯವಸ್ಥೆಯಲ್ಲಿ ಪ್ರದರ್ಶನ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT