ನವದೆಹಲಿ: ಖ್ಯಾತ ಪರಿಸರವಾದಿ, ಚಿಪ್ಕೊ ಚಳವಳಿಯ ನೇತಾರ ದಿವಂಗತ ಸುಂದರ್ಲಾಲ್ ಬಹುಗುಣ ಅವರಿಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ’ಭಾರತ ರತ್ನ’ ನೀಡಿ ಗೌರವಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ದೆಹಲಿಯ ವಿಧಾನಸಭೆಯಲ್ಲಿ ಆಯೋಜಿಸಿದ್ದ ಖ್ಯಾತ ಪರಿಸರವಾದಿ ಸುಂದರ್ಲಾಲ್ ಬಹುಗುಣ ಅವರಿಗೆ ಗೌರವ ನಮನ ಅರ್ಪಿಸುವ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅರವಿಂದ ಕೇಜ್ರಿವಾಲ್, ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.
’ಸುಂದರ್ಲಾಲ್ ಬಹುಗುಣ ಅವರಿಗೆ ’ಭಾರತ ರತ್ನ’ ಪ್ರಶಸ್ತಿ ನೀಡಿದರೆ, ಆ ಪ್ರಶಸ್ತಿ ಮೌಲ್ಯವೇ ಹೆಚ್ಚಾಗುತ್ತದೆ ಎಂದು ಭಾವಿಸಿದ್ದೇವೆ’ ಎಂದು ಕೇಜ್ರಿವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
’75ನೇ ವರ್ಷದ ಸ್ವಾತಂತ್ರೋತ್ಸವದಂದು ನಾವು ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ದೇಶಕ್ಕೆ ಕೊಡುಗೆ ನೀಡಿದ ಶ್ರೇಷ್ಠ ವ್ಯಕ್ತಿಗಳನ್ನು ಗೌರವಿಸುತ್ತೇವೆ. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸುಂದರಲಾಲ್ ಬಹುಗುಣ ಅವರನ್ನು ಭಾರತ ರತ್ನ ಪುರಸ್ಕಾರದೊಂದಿಗೆ ಗೌರವಿಸಬೇಕೆಂದು ದೆಹಲಿ ಸರ್ಕಾರದ ಪರವಾಗಿ ನಾನು ವಿನಂತಿಸುತ್ತೇನೆ’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬಹುಗುಣ ಅವರು ಕಣಿವೆ ರಾಜ್ಯ ಉತ್ತರಾಖಂಡದ ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮೀಸಲಿಟ್ಟಿದ್ದಾರೆ. ವೃಕ್ಷ ರಕ್ಷಣೆಯ ’ಚಿಪ್ಕೊ ಚಳವಳಿ’ಯಿಂದ ಆರಂಭವಾದ ಅವರ ಪರಿಸರ ಸಂರಕ್ಷಣಾ ಅಭಿಯಾನ, ಬೇರೆ ಬೇರೆ ರಾಜ್ಯಗಳಿಗೂ ವಿಸ್ತರಿಸಿತು. ಕಳೆದ ಮೇ 21ರಂದು 94ನೇ ವಯಸ್ಸಿನಲ್ಲಿ ಬಹುಗುಣ ನಿಧನರಾದರು.