ಡೆಹ್ರಾಡೂನ್: ಧರ್ಮಸಂಸದ್ನ ದ್ವೇಷ ಭಾಷಣ ಪ್ರಕರಣ ಸಂಬಂಧ ಗುರುವಾರ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ಪೊಲೀಸರು ವಾಸೀಂ ರಿಜ್ವಿ ಅಲಿಯಾಸ್ ಜಿತೇಂದ್ರ ನಾರಾಯಣ ತ್ಯಾಗಿ ಅವರನ್ನು ಬಂಧಿಸಿದ್ದಾರೆ.
ಹಿಂದೂಧರ್ಮಕ್ಕೆ ಮತಾಂತರಗೊಂಡ ನಂತರ ರಿಜ್ವಿ, ಜಿತೇಂದ್ರ ನಾರಾಯಣ ತ್ಯಾಗಿ ಎಂದು ಹೆಸರು ಬದಲಿಸಿಕೊಂಡಿದ್ದರು. ಇವರು ಸೇರಿ ದ್ವೇಷ ಭಾಷಣ ಕುರಿತು 10 ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಮತಾಂತರಕ್ಕೂ ಮುನ್ನ ಇವರು ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥರಾಗಿದ್ದರು. ರೂರ್ಕಿಯ ನರ್ಸನ್ ಗಡಿ ಭಾಗದಲ್ಲಿ ರಿಜ್ವಿ ಅವರನ್ನು ಬಂಧಿಸಲಾಗಿದೆ ಎಂದು ಹರಿದ್ವಾರದ ಎಸ್.ಪಿ.ತಿಳಿಸಿದ್ದಾರೆ.
ತನಿಖೆ ಮುಂದುವರಿದಂತೆ ಇನ್ನಷ್ಟು ಜನರನ್ನು ಬಂಧಿಸಲಾಗುವುದು ಎಂದು ತಿಳಿಸಿದರು. ದ್ವೇಷ ಭಾಷಣ ಪ್ರಕರಣ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಉತ್ತರಾಖಂಡ ಸರ್ಕಾರದ ಮೇಲೆ ತೀವ್ರ ಒತ್ತಡವಿತ್ತು. ಕ್ರಮ ಜರುಗಿಸುವಲ್ಲಿ ವಿಳಂಬ ಧೋರಣೆ ಕುರಿತು ಸುಪ್ರೀಂ ಕೋರ್ಟ್ ಕೂಡಾ ತರಾಟೆಗೆ ತೆಗೆದುಕೊಂಡಿತ್ತು.