ನವದೆಹಲಿ: ಕೇಂದ್ರ ಸರ್ಕಾರ 2016ರಲ್ಲಿ ನೋಟು ಅಮಾನ್ಯೀಕರಣದ ಮಾಡಿದ ಸಂದರ್ಭದಲ್ಲಿಹಣಕಾಸಿನ ಅಕ್ರಮ ವ್ಯವಹಾರ ನಡೆಸಿದ ವಿಚಾರದಲ್ಲಿ ಹಣ ಅಕ್ರಮ ವರ್ಗಾವಣೆ ತನಿಖೆ ಎದುರಿಸುತ್ತಿರುವ ಹೈದರಾಬಾದ್ ಮೂಲದ ವಿವಿಧ ಚಿನ್ನಾಭರಣ ಮಳಿಗೆಗಳು ಮತ್ತು ಅವರ ಪ್ರಮೋಟರ್ಗಳ ₹130 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವುದಾಗಿ ತನಿಖಾ ಸಂಸ್ಥೆ ತಿಳಿಸಿದೆ.
ಮುಸದ್ದಿಲಾಲ್ ಜೆಮ್ಸ್ ಮತ್ತು ಜ್ಯುವೆಲ್ಸ್ ಪ್ರೈವೇಟ್ ಲಿಮಿಟೆಡ್, ವೈಷ್ಣವಿ ಬುಲಿಯನ್ ಪ್ರೈವೇಟ್ ಲಿಮಿಟೆಡ್ ಮತ್ತು ಮುಸದ್ದಿಲಾಲ್ ಜ್ಯುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.
ಜಪ್ತಿ ಮಾಡಿದ ಸ್ವತ್ತುಗಳಲ್ಲಿ, 41 ಸ್ಥಿರ ಆಸ್ತಿಗಳು, ಷೇರುಗಳು ಮತ್ತು ಆಭರಣಗಳ ಮೇಲೆ ಮಾಡಿದ ಹೂಡಿಕೆಗಳು ಮತ್ತು ಕೆಲವು ವರ್ಷಗಳ ಹಿಂದೆ ನಡೆಸಿದ ದಾಳಿಗಳಲ್ಲಿ ವಶಪಡಿಸಿಕೊಂಡ ₹83.30 ಕೋಟಿ ಮೊತ್ತದ ಚಿನ್ನದ ಗಟ್ಟಿಯೂ ಸೇರಿದೆ.ಈ ಆಸ್ತಿಗಳ ಒಟ್ಟು ಮೌಲ್ಯ ₹130.57 ಕೋಟಿ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಹಣಅಕ್ರಮ ವರ್ಗಾವಣೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಈ ವಸ್ತುಗಳು, ಆಸ್ತಿಯನ್ನು ಜಪ್ತಿ ಮಾಡಲಾಗಿದೆ. 2016ರಲ್ಲಿ ನೋಟು ಅಮಾನ್ಯೀಕರಣದ ವೇಳೆಯಲ್ಲಿ ತೆಲಂಗಾಣ ಪೊಲೀಸರು ಆಭರಣ ಮಳಿಗೆಗಳ ಮಾಲೀಕರ ಮನೆಗಳ ಮೇಲೆ ದಾಳಿ ನಡೆಸಿದ ನಂತರ ದಾಖಲಿಸಿದ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.