ಚಂಡೀಗಡ: ಪಂಜಾಬ್ನ ಅಬಕಾರಿ ಆಯುಕ್ತರು, ಜಂಟಿ ಆಯುಕ್ತರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವ ಪ್ರಕರಣಕ್ಕೆ ಸಂಬಂದಿಸಿ ಈ ದಾಳಿ ನಡೆದಿದೆ ಎಂಬುದು ತಿಳಿದುಬಂದಿಲ್ಲ.
ಚಂಡೀಗಡದ ಸೆಕ್ಟರ್ 20ರಲ್ಲಿರುವ ಐಎಎಸ್ ಅಧಿಕಾರಿ, ಅಬಕಾರಿ ಆಯುಕ್ತ ವರುಣ್ ರೂಜಂ ಹಾಗೂ ಹರಿಯಾಣದ ಪಂಚಕುಲದಲ್ಲಿರುವ ಜಂಟಿ ಆಯುಕ್ತ (ಅಬಕಾರಿ) ನರೇಶ್ ದುಬೆ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇಬ್ಬರೂ ಅಧಿಕಾರಿಗಳು ಜುಲೈಯಲ್ಲಿ ಜಾರಿಯಾದ ‘ಪಂಜಾಬ್ ಅಬಕಾರಿ ನೀತಿ’ ರೂಪಿಸಲು ಕೆಲಸ ಮಾಡಿದ್ದರು.
ವರುಣ್ ರೂಜಂ ಹಾಗೂ ನರೇಶ್ ದುಬೆ ಅವರು ತಕ್ಷಣಕ್ಕೆ ಸಂಪರ್ಕಕ್ಕೆ ದೊರೆತಿಲ್ಲ.
ಅಬಕಾರಿ ನೀತಿ ಹಗರಣದ ಆರೋಪಕ್ಕೆ ಸಂಬಂಧಿಸಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಸಿಸೋಡಿಯಾ ಅವರ ಬ್ಯಾಂಕ್ ಲಾಕರ್ ಅನ್ನು ಸಿಬಿಐ ಅಧಿಕಾರಿಗಳು ಪರಿಶೀಲಿಸಿದ್ದರು.
ಅಬಕಾರಿ ನೀತಿ ಅನುಷ್ಠಾನದಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸೇರಿ ಆರು ರಾಜ್ಯಗಳ ಪ್ರಮುಖ ನಗರಗಳಲ್ಲಿ ಮಂಗಳವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು. ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಗರಗಳಲ್ಲಿ ದಾಳಿ ನಡೆದಿತ್ತು.