ನವದೆಹಲಿ: ಪರಿಸರ ಪರಿಣಾಮ ಅಧ್ಯಯನ (ಇಐಎ) ಕರಡು ಪ್ರತಿಗೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನುತರಾಟೆಗೆ ತೆಗೆದುಕೊಂಡಿದ್ದು, ಪರಿಸರದ ಮೇಲಿನ ಪ್ರತಿಕೂಲ ಪರಿಣಾಮ ತಡೆಯಲು ಇದನ್ನುವಾಪಸು ಪಡೆಯಬೇಕು ಎಂದು ಆಗ್ರಹಪಡಿಸಿದ್ದಾರೆ.
ಉದ್ದೇಶಿತ `ಇಐಎ 2020' ಕರಡು ಅಧಿಸೂಚನೆಯು ದೇಶವನ್ನು ಲೂಟಿ ಮಾಡುವ ನೆರವಾಗುವ ಉದ್ದೇಶ ಒಳಗೊಂಡಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ದೇಶದ ಸಂಪನ್ಮೂಲ ಲೂಟಿ ಹೊಡೆಯಲು ಆಯ್ದ 'ಸ್ನೇಹಿತರಿಗೆ' ನೆರವಾಗಲು ಬಿಜೆಪಿ ಕೈಗೊಳ್ಳುತ್ತಿರುವ ಕ್ರಮಗಳಿಗೆ ಇದು ಇನ್ನೊಂದು ಉದಾಹರಣೆ ಎಂದು ವ್ಯಾಖ್ಯಾನಿಸಿದ್ದಾರೆ.
ಇಐಎ 2020 ಕರಡನ್ನು ಖಂಡಿತವಾಗಿ ವಾಪಸು ಪಡೆಯಬೇಕು ಎಂದು ಈ ಸಂಬಂಧಿತ ಟ್ವೀಟ್ ನಲ್ಲಿ ಅವರು ಒತ್ತಾಯಿಸಿದ್ದಾರೆ.
ಇಐಎ 2020 ಕರಡು ಅಧಿಸೂಚನೆಯ ಪ್ರಕಾರ, ವಿವಿಧ ಯೋಜನೆಗಳಿಗೆ ಪರಿಸರ ಸಂಬಂಧ ಸಾಧಕ-ಬಾಧಕ ಪರಿಶೀಲಿಸಿ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿ ಪರಿಸರ ಸಚಿವಾಲಯವು ಕಳೆದ ಮಾರ್ಚ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿದೆ.
ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪ ಸಲ್ಲಿಸಲು ಮೊದಲು ಜೂನ್ 30ರವರೆಗೂ ಗಡುವು ನೀಡಿದ್ದ ಸಚಿವಾಲಯವು ಬಳಿಕ ಗಡುವನ್ನು ಆಗಸ್ಟ್ 12ರವರೆವಿಗೂ ವಿಸ್ತರಿಸಿದೆ.