ಕೋಯಿಕ್ಕೋಡ್ (ಪಿಟಿಐ): ‘ಐದು ವರ್ಷಗಳ ಹಿಂದೆ ತನಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈದ್ಯರು ‘ಫಾರ್ಸೆಪ್ಸ್’ (ಶಸ್ತ್ರಚಿಕಿತ್ಸೆಗಾಗಿ ಬಳಸುವ ಚಿಮುಟ) ಅನ್ನು ಹೊಟ್ಟೆಯಲ್ಲೇ ಬಿಟ್ಟಿದ್ದಾರೆ’ ಎಂದು ಆರೋಪಿಸಿ ಹರ್ಷಿಣಿ ಎಂಬುವರು ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್, ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಶೀಘ್ರವೇ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.
‘2017ರ ನವೆಂಬರ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೆ. ಬಳಿಕ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರಿಂದ ಹೀಗೆ ಆಗುತ್ತಿರಬಹುದೆಂದು ಭಾವಿಸಿದ್ದೆ. ಕಿಡ್ನಿಯಲ್ಲಿ ಕಲ್ಲು ಇರಬಹುದು ಎಂದೂ ಭಾವಿಸಿದ್ದೆ. ಆರು ತಿಂಗಳಿಂದ ನೋವು ವಿಪರೀತವಾಗಿ ಬಾಧಿಸುತ್ತಿತ್ತು. ಸಿ.ಟಿ.ಸ್ಕ್ಯಾನ್ ಮಾಡಿದ್ದ ವೈದ್ಯರು ಲೋಹದ ವಸ್ತುವೊಂದು ಇರಬಹುದು ಎಂದು ತಿಳಿಸಿದ್ದರು. ಹೀಗಾಗಿ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದೆ. ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ‘ಫಾರ್ಸೆಪ್ಸ್’ ಹೊರತೆಗೆದಿದ್ದಾರೆ’ ಎಂದು ಹರ್ಷಿಣಿ ಮಾಹಿತಿ ನೀಡಿದ್ದಾರೆ.