ಬಲ್ಲಿಯಾ, ಉತ್ತರ ಪ್ರದೇಶ (ಪಿಟಿಐ): ಮೂವತ್ತು ದಿನಗಳಲ್ಲೇ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರೆ 700ಕ್ಕೂ ಹೆಚ್ಚು ರೈತರ ಸಾವನ್ನು ತಪ್ಪಿಸಬಹುದಿತ್ತು ಎಂದು ಬಿಜೆಪಿಯ ಮಾಜಿ ಶಾಸಕ ರಾಮ್ ಇಕ್ಬಾಲ್ ಸಿಂಗ್ ತಮ್ಮ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ನಗ್ರಾ ಎಂಬಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದು ಒಂದೆಡೆ ಸಂತೋಷ ತರುವ ಸಂಗತಿಯಾದರೆ, ಇನ್ನೊಂದೆಡೆ ಈ ನಿರ್ಧಾರ ತಡವಾಯಿತು ಎನಿಸುತ್ತದೆ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮೃತ ರೈತರ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ರೈತರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಒಪ್ಪಬೇಕು ಎಂದು ಅವರು ಒತ್ತಾಯಿಸಿದರು.
ಕೃಷಿ ಕಾನೂನುಗಳನ್ನು ಜಾರಿಗೊಳಿಸುವ ಮೊದಲು ಕೇಂದ್ರವು ರೈತರೊಂದಿಗೆ ಸಮಾಲೋಚಿಸಿದ್ದರೆ ರೈತರು ಪ್ರತಿಭಟನೆಗೆ ಮುಂದಾಗುತ್ತಿರಲಿಲ್ಲ ಎಂದು ಅವರು ಈ ಹಿಂದೆ ಹೇಳಿದ್ದರು.
ದೇಶದ ಸ್ವಾತಂತ್ರ್ಯ ಹೋರಾಟದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಕಂಗನಾ ರನೌತ್ ವಿರುದ್ಧವೂ ಇಕ್ಬಾಲ್ ವಾಗ್ದಾಳಿ ನಡೆಸಿದ್ದಾರೆ.