ಗ್ಯಾಂಗ್ಟಾಕ್: ಭೂಕುಸಿತ ಸಂಭವಿಸಿರುವ ಸಿಕ್ಕಿಂನ ಯುಮ್ತಾಂಗ್ ಕಣಿವೆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 74 ಮಂದಿ ಪ್ರವಾಸಿಗರನ್ನು ಭಾರತೀಯ ಸೇನೆಯ ಯೋಧರು ರಕ್ಷಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಯುಮ್ತಾಂಗ್ ಕಣಿವೆಯಿಂದ 19 ಕಿ.ಮೀ. ದೂರದಲ್ಲಿ ಭಾರಿ ಭೂಕುಸಿತ ಸಂಭವಿಸಿ, ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಅರಿತು ಯೋಧರು ಅಲ್ಲಿಗೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಭೂಕುಸಿತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದೂ ಹೇಳಿದೆ.
ಪ್ರವಾಸಿಗರಿದ್ದ ಎಂಟು ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿದ್ದವು. ಮಹಿಳೆಯರು ಮತ್ತು ಮಕ್ಕಳೂ ಈ ವಾಹನಗಳಲ್ಲಿದ್ದರು ಎಂದೂ ತಿಳಿಸಿದೆ.