ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತು ಇತರ ಇಬ್ಬರ ವಿರುದ್ಧ ಆರೋಪಪಟ್ಟಿಯನ್ನು ದಾಖಲಿಸಿದೆ.
ಕುಲಕರ್ಣಿ ಅವರಲ್ಲದೇ, ಚಂದ್ರಶೇಖರ ಇಂಡಿ ಮತ್ತು ಶಿವಾನಂದ ಬಿರಾದಾರ್ ವಿರುದ್ಧ ಧಾರವಾಡದಲ್ಲಿ ಇರುವ ವಿಶೇಷ ಕೋರ್ಟ್ ನಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
2016ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಆರೋಪಿಗಳು ಮೃತನ ಜೊತೆಗೆ ರಾಜಕೀಯ ಮತ್ತು ವೈಯಕ್ತಿಕ ದ್ವೇಷ ಹೊಂದಿದ್ದರು. ಮಾಜಿ ಸಚಿವರು ತನ್ನ ಸಹಚರರ ಜೊತೆಗೂಡಿ ಸಂಚು ನಡೆಸಿದ್ದರು. ಇದರ ಭಾಗವಾಗಿ ಒಬ್ಬ ಸಹಚರ ಕೃತ್ಯ ಎಸಗಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೇಳಲಾಗಿದೆ.
ಬಳಿಕ ಭೂ ವಿವಾದದ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎಂದು ಬಿಂಬಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸಿಬಿಐ ಮೂರು ನಾಡ ಪಿಸ್ತೂಲ್ ಅನ್ನೂ ಜಪ್ತಿ ಮಾಡಿದೆ ಎಂದು ಸಿಬಿಐ ವಕ್ತಾರರಾದ ಆರ್.ಸಿ.ಜೋಷಿ ಅವರು ತಿಳಿಸಿದರು.
ಕೃತ್ಯ ಎಸಗಿದವರು ಬೆಂಗಳೂರಿನಿಂದ ಬಂದಿದ್ದು, ಕುಲಕರ್ಣಿ ಅವರ ಆಪ್ತರು ಮಾಲೀಕರಾಗಿದ್ದ ರೆಸಾರ್ಟ್ ಒಂದರಲ್ಲಿ ಜೂನ್ 7, 2016ರಂದು ತಂಗಿದ್ದರು. ಅದೇ ದಿನ ಕೊಲೆ ಎಸಗಲು ಮೊದಲ ಯತ್ನವೂ ನಡೆದಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.